ಟೆಸ್ಟ್‌ ಕ್ರಿಕೆಟ್‌ಗೂ ರಾಹುಲ್ ಮರಳುವುದು ಬಹುತೇಕ ಖಚಿತ!

ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿರುವ ಕನ್ನಡಿಗ ಹಾಗೂ ಆರಂಭಿಕ ಬ್ಯಾಟ್ಸ್‌‌ಮನ್ ಕೆ.ಎಲ್ ರಾಹುಲ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದು, ದೀರ್ಘಾವಧಿ ಮಾದರಿಯಲ್ಲೂ ಅದೇ ಲಯ ಮುಂದುವರಿಸಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ
ಕೆಎಲ್ ರಾಹುಲ್, ರಿಷಭ್ , ಗಂಗೂಲಿ
ಕೆಎಲ್ ರಾಹುಲ್, ರಿಷಭ್ , ಗಂಗೂಲಿ

ನವದೆಹಲಿ: ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿರುವ ಕನ್ನಡಿಗ ಹಾಗೂ ಆರಂಭಿಕ ಬ್ಯಾಟ್ಸ್‌‌ಮನ್ ಕೆ.ಎಲ್ ರಾಹುಲ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದು, ದೀರ್ಘಾವಧಿ ಮಾದರಿಯಲ್ಲೂ ಅದೇ ಲಯ ಮುಂದುವರಿಸಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ರಿಷಭ್ ಪಂತ್ ಅವರನ್ನು ಅಂತಿಮ 11 ರಿಂದ ಕೈಬಿಟ್ಟು ಕೆ.ಎಲ್ ರಾಹುಲ್ ಅವರಿಗೆ ಆರಂಭಿಕ ಹಾಗೂ ವಿಕೆಟ್ ಕೀಪಿಂಗ್ ಎರಡು ಜವಾಬ್ದಾರಿಯನ್ನು ನೀಡಲಾಗಿದೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲೂ ರಾಹುಲ್ ಶಹಬಾಷ್ ಎನಿಸಿಕೊಂಡಿದ್ದಾರೆ. 

ಈ ಬಗ್ಗೆ ಗಂಗೂಲಿ ಪ್ರತಿಕ್ರಿಯಿಸಿ,‘‘ ಏಕದಿನ ಹಾಗೂ ಟ್ವೆಂಟಿ 20 ಕ್ರಿಕೆಟ್‌ನಲ್ಲಿ ರಾಹುಲ್ ಅದ್ಭುತ  ಪ್ರದರ್ಶನ ತೋರುತ್ತಿದ್ದಾರೆ.  ಟೆಸ್ಟ್‌ ಕ್ರಿಕೆಟ್ ಅನ್ನೂ ಅವರು ಉತ್ತಮವಾಗಿಯೇ ಆರಂಭಿಸಿದ್ದರು. ನಂತರ, ಲಯ ಕಳೆದುಕೊಂಡಿದ್ದರು. ಆದರೆ, ಸೀಮಿತ ಓವರ್ ಮಾದರಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಅವರು ಇದೇ ಲಯವನ್ನು ಟೆಸ್ಟ್‌ ಕ್ರಿಕೆಟ್ ನಲ್ಲೂ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಎಲ್ಲ ನಿರ್ಧಾರವನ್ನು ಟೀಮ್ ಮ್ಯಾನೇಜ್‌ಮೆಂಟ್ ನೋಡಿಕೊಳ್ಳಲಿದೆ,’’ ಎಂದು ಹೇಳಿದರು.

ರಾಹುಲ್ ಹಾಗೂ ಪಂತ್ ಅವರ ವಿಕೆಟ್ ಕೀಪಿಂಗ್ ಸ್ಫರ್ಧೆ ಬಗ್ಗೆ ಪ್ರತಿಕ್ರಯಿಸಿ,‘‘ಈ ಬಗ್ಗೆ ಆಯ್ಕೆದಾರರು, ನಾಯಕ ವಿರಾಟ್ ಕೊಹ್ಲಿ ಹಾಗೂ ಮುಖ್ಯ ಕೋಚ್ ರವಿಶಾಸ್ತ್ರಿ ನಿರ್ಧರಿಸಲಿದ್ದಾರೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದೇ ಅಂತಿಮವಾಗಲಿದೆ,’’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ರಾಹುಲ್ ವಿಕೆಟ್ ಕೀಪಿಂಗ್ ಬಗ್ಗೆ ಮಾತನಾಡಿ, ‘‘ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೂರು ವರ್ಷಗಳ ಕಾಲ ವಿಕೆಟ್ ಕೀಪಿಂಗ್ ಮಾಡಿದ್ದೇನೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಜವಾಬ್ದಾರಿ ಹೊಸತಾಗಿದೆ. ಇದನ್ನು ನಾನು ಪ್ರೀತಿಸುತ್ತಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ವಿಕೆಟ್ ಕೀಪಿಂಗ್ ಮಾಡಿದ್ದೇನೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ನನಗೆ ಹೊಸ ಅನುಭವ,’’ ಎಂದು ರಾಹುಲ್ ಹೇಳಿದ್ದರು.

ರಾಹುಲ್ ವಿಕೆಟ್ ಕೀಪಿಂಗ್ ನಿರ್ವಹಣೆಯ ಜತೆಗೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಇದು ತಂಡದ ನಾಯಕ ವಿರಾಟ್ ಕೊಹ್ಲಿಯ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಧೋನಿ ಉತ್ತರಾಧಿಕಾರಿ ಎಂದೇ ಹೇಳುತ್ತಿರುವ ರಿಷಭ್ ಪಂತ್‌ಗೆ ಇದು ಅಪಾಯಕಾರಿಯಾಗಿದೆ. ಒಂದು ವೇಳೆ ರಾಹುಲ್ ವಿಕೆಟ್ ಕೀಪಿಂಗ್‌ನಲ್ಲಿ ಇನ್ನಷ್ಟು ಚೆನ್ನಾಾಗಿ ಕೌಶಲ ಮೆರೆದರೆ, ಪಂತ್‌ಗೆ ಗೇಟ್ ಪಾಸ್ ಗ್ಯಾರೆಂಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com