ನವದೆಹಲಿ: ಈ ಹಿಂದೆ ಟ್ವೀಟ್ ವಾರ್ ಮೂಲಕ ಸುದ್ದಿಯಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಮತ್ತೊಮ್ಮೆ ಟ್ವೀಟ್ ವಾರ್ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
2019ರ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆರಂಭವಾಗಿದ್ದ ಇಬ್ಬರ ನಡುವಿನ ಟ್ವೀಟ್ ವಾರ್ ಕೊಂಚ ಕಾಲ ತಣ್ಣಗಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಶುರುವಾಗಿದ್ದು, ಈ ಬಾರಿಯೂ ಸಂಜಯ್ ಮಂಜ್ರೇಕರ್ ಅವರೇ ಪರೋಕ್ಷವಾಗಿ ಜಡೇಜಾ ಅವರ ಕಾಲೆಳೆದಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಏಕದಿನ ಪಂದ್ಯದ ನಂತರ ಟ್ವೀಟ್ ಮಾಡಿದ್ದ ಮಂಜ್ರೇಕರ್ ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರಿಗೆ ನೀಡಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಅವರು ಪ್ರಶ್ನಿಸಿದ್ದರು. ಅಲ್ಲದೆ ಓರ್ವ ಬೌಲರ್ ಗೆ ನೀಡಬೇಕಿತ್ತು ಎಂದು ಟ್ವೀಟ್ ಮಾಡಿದ್ದರು.
ಮಂಜ್ರೇಕರ್ ಅವರ ಟ್ವೀಟ್ ಗೆ ಉತ್ತರಿಸಿರುವ ರವೀಂದ್ರ ಜಡೇಜಾ, ಈ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು? ಎಂದು ಸ್ಪಷ್ಟವಾಗಿ ಹೇಳಬೇಕು. 'ಆ ಬೌಲರ್ ಹೆಸರೇನು? ದಯವಿಟ್ಟು ಅವನ ಹೆಸರನ್ನು ನೀಡಿ ಎಂದು ಮಂಜ್ರೇಕರ್ ಅವರ ಕಾಲೆಳೆದಿದ್ದಾರೆ. ಇದಕ್ಕೂ ಉತ್ತರ ನೀಡಿರುವ ಮಂಜ್ರೇಕರ್ ಸ್ಪಷ್ಟ ಉತ್ತರ ನೀಡದೇ, 'ಹಾ ಹಾ .. ನೀವು ಅಥವಾ ಬುಮ್ರಾ ಎಂದು ಬರೆದಿದ್ದಾರೆ.
ಇನ್ನು ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬುಮ್ರಾ ಅವರ ಪಾತ್ರ ಪ್ರಮುಖವಾಗಿತ್ತು. 4 ಓವರ್ ಗಳನ್ನು ಎಸೆದಿದ್ದ ಜಡೇಜಾ, ಕೇವಲ 18 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದಿದ್ದರು. ಅಂತೆಯೇ 4 ಓವರ್ ಎಸೆದಿದ್ದ ಬುಮ್ರಾ 21 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಅಲ್ಲದೆ 18 ಮತ್ತು 20 ಓವರ್ ಎಸೆದಿದ್ದ ಬುಮ್ರಾ ಕಿವೀಸ್ ಬ್ಯಾಟ್ಸಮನ್ ಗಳಿಗೆ ಕಬ್ಬಿಣದ ಕಡಲೆಯಾಗಿದ್ದರು.
Advertisement