ಕೊಚ್ಚಿ: 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ಆರೋಪದಿಂದ ಸದ್ಯ ದೋಷ ಮುಕ್ತಗೊಂಡಿರುವ ಕೇರಳದ ವೇಗಿ ಎಸ್. ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಮರಳಲು ಸಜ್ಜಾಗಿದ್ದಾರೆ.
ಫಿಕ್ಸಿಂಗ್ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದ ಶ್ರೀಶಾಂತ್ ಸುಮಾರು 7 ವರ್ಷಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ಹೊರಗಿದ್ದರು. ಆದರೀಗ ಸ್ಪರ್ಧೆಗೆ ಮರಳಲು ಹಾತೊರೆಯುತ್ತಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎಸ್ ಶ್ರೀಶಾಂತ್ ಕಳೆದ ವರ್ಷ ಆರೋಪ ಮುಕ್ತರಾಗಿ ಹೊರಬಂದರಾದರೂ ಅವರ ವಿರುದ್ಧ ಬಿಸಿಸಿಐ ಹೇರಿದ್ದ ಆಜೀವ ನಿಷೇಧ ಮಾತ್ರ ಮುಂದುವರಿದಿತ್ತು.
ಇದರ ವಿರುದ್ಧವೂ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದ ಶ್ರೀ ನಿಷೇಧದ ಅವಧಿಯನ್ನು ತಗ್ಗಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಈ ಮೂಲಕ ಮುಂಬರುವ ಸೆಪ್ಟೆಂಬರ್ಗೆ ಕೇರಳ ವೇಗಿಗೆ ಎಲ್ಲ ನಿಷೇಧಗಳು ದೂರವಾಗಲಿದ್ದು, ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವುದನ್ನು ಎದುರು ನೋಡುತ್ತಿದ್ದಾರೆ.
ಈಗಾಗಲೇ ಕೇರಳ ಕ್ರಿಕೆಟ್ ಸಂಸ್ಥೆ ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೇರಳ ರಣಜಿ ತಂಡ ಶ್ರೀಶಾಂತ್ ಬೆಂಬಲ ಪಡೆಯಲಿದೆ ಎಂದು ಘೋಷಿಸಿದೆ. ಇದರೊಂದಿಗೆ ಶ್ರೀಶಾಂತ್ ಕಮ್ಬ್ಯಾಕ್ ಬಹುತೇಕ ಖಾತ್ರಿಯಾಗಿದೆ. ಇದರ ಬೆನ್ನಲ್ಲೇ ಮಾತಿಗಿಳಿದಿರುವ ಶ್ರೀಶಾಂತ್, ಮುಂಬರುವ ಐಪಿಎಲ್ಗಾಗಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ತಾವು ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಎರಡನೇ ಇನಿಂಗ್ಸ್ ಆರಂಭಿಸಲು ತಾವು ರೆಡಿ ಎಂದು ಘೋಷಿಸಿದ್ದಾರೆ.
ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಇಂಗಿತವನ್ನೂ ಶ್ರೀಶಾಂತ್ ಹೊರಹಾಕಿದ್ದಾರೆ. "ಧೋನಿ ಸಾರಥ್ಯದ ಸಿಎಸ್ಕೆ ಅಥವಾ ಆರ್ಸಿಬಿ ಪರ ಆಡುವುದನ್ನೂ ಬಯಸುತ್ತೇನೆ," ಎಂದಿದ್ದಾರೆ. ಶ್ರೀಶಾಂತ್ ಈ ಮೊದಲು ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ್ ರಾಯಲ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ.
Advertisement