ಡೆಹ್ರಾಡೂನ್: ಭಾರತದ ಗಾಲಿಕುರ್ಚಿ ಕ್ರಿಕೆಟ್ ತಂಡದ ಮಾಜಿ ನಾಯಕ ರಾಜೇಂದ್ರ ಸಿಂಗ್ ಧಾಮಿ ಅವರು ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
ಈ ವರದಿಯಿಂದ ಎಚ್ಚೇತ ರಾಜ್ಯ ಸರ್ಕಾರ, ಐಒಎ ಇದೀಗ ರಾಜೇಂದ್ರ ಸಿಂಗ್ ಧಾಮಿ ನೆರವಿಗೆ ಧಾವಿಸಿದೆ. ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಮಾತನಾಡಿ "ನಾವು ಇಂದು 50,000 ರೂ.ಗಳ ತಕ್ಷಣದ ಸಹಾಯವನ್ನು ಘೋಷಿಸಿದ್ದೇವೆ. ಅವರ ಅವಶ್ಯಕತೆಗಳು ಮತ್ತು ಅಗತ್ಯತೆಗಳು ಏನೇ ಇರಲಿ ಅದನ್ನು ನೋಡಿಕೊಳ್ಳಲಾಗುವುದು. ನಾನು ಉತ್ತರಾಖಂಡದಲ್ಲಿರುವ ನಮ್ಮ ರಾಜ್ಯ ಸಂಸ್ಥೆಯೊಂದಿಗೆ ಮಾತನಾಡಿದ್ದೇನೆ. ಎಲ್ಲಾ ರೀತಿಯ ಸಹಾಯ ಮತ್ತು ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಉತ್ತರಾಖಂಡದ ಗಾಲಿಕುರ್ಚಿ ಕ್ರಿಕೆಟ್ ತಂಡದ ನಾಯಕ ಹುದ್ದೆಯನ್ನು ಅಲಂಕರಿಸಿದ್ದ ಧಾಮಿಗೆ ಜಿಲ್ಲಾಡಳಿತದ ಅಧಿಕಾರಿಗಳು ಫೋನ್ ಮಾಡಿದ್ದಾರೆ. ಪಿಥೋರ್ಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನನ್ನನ್ನು ಭೇಟಿಯಾಗಲು ಸೂಚಿಸಿದ್ದಾರೆ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ಹೋಗುತ್ತೇನೆ ಎಂದು ಧಮಿ ಹೇಳಿದರು.
ಪಿಥೋರ್ಗರ್ ಜಿಲ್ಲೆಯ ರಾಯ್ಕೋಟ್ ಗ್ರಾಮದ ನಿವಾಸಿ ರಾಜೇಂದ್ರ ಸಿಂಗ್ ಧಾಮಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಜೀವನೋಪಾಯಕ್ಕಾಗಿ ಕಲ್ಲು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ.
ಪಿಥೋರ್ಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಜೋಗಂದಾಂಡೆ ಅವರು ಮಾತನಾಡಿ, ನಾವು ಧಾಮಿಯನ್ನು ಸಂಪರ್ಕಿಸಿದ್ದೇವೆ ಮತ್ತು ಅವರಿಗೆ ಜಿಲ್ಲಾ ಕ್ರೀಡಾ ಅಧಿಕಾರಿಯಿಂದ ಸಹಾಯ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸ್ವರೋಜ್ಗರ್ ಯೋಜನೆ ಅಥವಾ ಇತರ ಯೋಜನೆಗಳ ಅಡಿಯಲ್ಲಿ ಅವರಿಗೆ ಉದ್ಯೋಗ ನೀಡುವ ಆಯ್ಕೆಗಳನ್ನು ನಾವು ಯೋಜಿಸಿದ್ದೇವೆ ಎಂದು ಹೇಳಿದರು.
Advertisement