ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಣಾಹಣಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಆ ಮೂಲಕ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಚುಟುಕು ವಿಶ್ವಕಪ್ ಚೊಚ್ಚಲ ಫೈನಲ್ ಪ್ರವೇಶ ಮಾಡಿತು.
ಎ ಗುಂಪಿನ ಎಲ್ಲ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತ್ತು. ಈ ಹಿನ್ನೆಲೆಯಲ್ಲಿ ವನಿತೆಯರು ಫೈನಲ್ಗೆ ನೇರ ಪ್ರವೇಶ ಪಡೆದರು. ಟಿ20 ವಿಶ್ವಕಪ್ ಇತಿಹಾಸದಲ್ಲಿಯೇ ಒಮ್ಮೆಯು ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದ ಭಾರತಕ್ಕೆ ಪಂದ್ಯ ಆಡದೇ ಇದ್ದರೂ ವರುಣದೇವ ದಯಪಾಲಿಸಿತು. ಮೊಟ್ಟ ಮೊದಲ ಬಾರಿ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಫೈನಲ್ ಪ್ರವೇಶ ಮಾಡಿರುವುದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅಭಿನಂದನೆ ಸಲ್ಲಿಸಿದ್ದಾರೆ.
"ಭಾರತ ಮಹಿಳಾ ತಂಡ ಫೈನಲ್ ಪ್ರವೇಶ ಮಾಡಿರುವುದ್ದಕ್ಕೆ ನನಗೆ ರೋಮಂಚನವಾಗಿದೆ. ಆದರೆ, ಒಬ್ಬ ಕ್ರಿಕೆಟ್ ಆಟಗಾರ್ತಿಯಾಗಿ ಈ ವೇಳೆ ಇಂಗ್ಲೆಂಡ್ ಆಟಗಾರ್ತಿರ ಬಗ್ಗೆಯೂ ಯೋಚನೆ ಮಾಡಬೇಕು. ಆ ಸನ್ನಿವೇಶದಲ್ಲಿ ನಾನಾಗಲಿ ಅಥವಾ ನಮ್ಮ ತಂಡವಾಗಲಿ ಇರಲು ನಾನು ಬಯಸುವುದಿಲ್ಲ. ನಿಯಮ ಎಂದ ಮೇಲೆ ಎಲ್ಲರಿಗೂ ಒಂದೇ. ಏನೇ ಆಗಲಿ, ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು,'' ಎಂದು ಮಿಥಾಲಿ ರಾಜ್ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶುಭಹಾರೈಸಿದ್ದು, "ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶ ಮಾಡರುವ ಭಾರತ ತಂಡಕ್ಕೆ ಅಭಿನಂದನೆಗಳು. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಿಮಗೆ ಒಳ್ಳೆಯದಾಗಲಿ,'' ಎಂದು ಟ್ವೀಟ್ ಮಾಡಿದ್ದಾರೆ.
ಹಿರಿಯ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಲಿ ಕೂಡ ಅಭಿನಂದನೆ ಸಲ್ಲಿಸಿದ್ದು, " ಫೈನಲ್ ತಲುಪಿರುವುದಕ್ಕೆ ಭಾರತ ಮಹಿಳಾ ತಂಡಕ್ಕೆ ಅಭಿನಂದನೆಗಳು. ಗುಂಪು ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರುವ ನಿಮಗೆ ಪ್ರಶಸ್ತಿ ಹಂತ ತಲುಪುವ ಎಲ್ಲ ಅರ್ಹತೆ ಇದೆ. ಇನ್ನೊಂದು ಪಂದ್ಯವಿದೆ, ಗುಡ್ಲಕ್," ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ ಹಾಗೂ ಇರ್ಫಾನ್ ಫಠಾನ್ ಕೂಡ ಭಾರತ ಮಹಿಳಾ ತಂಡ ಫೈನಲ್ ಪ್ರವೇಶ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದು, ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಶುಭಹಾರೈಸಿದ್ದಾರೆ.
Congratulations to the Indian Women's team on qualifying for the @T20WorldCup final. We are proud of you girls and wish you all the luck for the finals.
Advertisement