ರೋಹಿತ್ ಶರ್ಮಾ ಯಶಸ್ಸಿನ ಕ್ರೆಡಿಟ್ ಧೋನಿಗೆ ಸಲ್ಲಬೇಕು- ಗೌತಮ್ ಗಂಭೀರ್
ನವದೆಹಲಿ: ಏಕದಿನ ಹಾಗೂ ಟಿ-20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಕ್ಷಿಪ್ರಗತಿಯಲ್ಲಿ ಯಶಸ್ಸು ಸಾಧಿಸಿದ ಶ್ರೇಯಸ್ಸು ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಲ್ಲಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
2007ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಸ್ಥಿರತೆಯ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ನರಳುತ್ತಿದ್ದರು. ರೋಹಿತ್ ಒಳಗೆ ಇರುವ ಪ್ರತಿಭೆಯನ್ನು ಗಮನಿಸಿದ ಎಂಎಸ್ ಧೋನಿ 2013ರಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿಸಿದರು. ಇದರಿಂದಾಗಿ ಏಕದಿನ ಹಾಗೂ ಟಿ-20 ಕ್ರಿಕೆಟ್ ನಲ್ಲಿ ಹೊಡಿಬಡಿ ಬ್ಯಾಟ್ಸ್ ಮನ್ ಆಗಿ ರೋಹಿತ್ ಶರ್ಮಾ ರೂಪುಗೊಳ್ಳುವಲ್ಲಿ ನೆರವಾಗಿದೆ.
ರೋಹಿತ್ ಶರ್ಮಾ ಈಗ ಆರಂಭಿಕ ಬ್ಯಾಟ್ಸ್ ಮನ್ ಆಗಿ ಇರುವುದಕ್ಕೆ ಧೋನಿ ಕಾರಣ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಎಂಎಸ್ ಧೋನಿ ರೋಹಿತ್ ಶರ್ಮಾಗೆ ನೀಡಿದ ಬೆಂಬಲವನ್ನು ಇತರ ಯಾವುದೇ ಆಟಗಾರರಿಗೆ ನೀಡಲಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಈ ಹಿಂದೆ ರೋಹಿತ್ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಗೌತಮ್ ಗಂಭೀರ್, ರೋಹಿತ್ ಶರ್ಮಾಏಕದಿನ ಹಾಗೂ ಟಿ-20 ಕ್ರಿಕೆಟ್ ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಗೌತಿ ಬಾಯ್ ಬಗ್ಗೆ ಗೊತ್ತಿಲ್ಲ, ಆದರೆ, ನಿಮ್ಮ ಕೆಲಸವನ್ನು ಪ್ರೀತಿಸುತ್ತೇನೆ ಎಂದು ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದರು.