ನವದೆಹಲಿ: ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಯಾಗದೇ ಇದ್ದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಆಗುವ ಸಹಸ್ರಾರು ಕೋಟಿ ರೂ. ನಷ್ಟದ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ಕ್ಕೆ ಶುರುವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ಮುಂದಿನ ಆದೇಶದವರೆಗೆ ರದ್ದು ಪಡಿಸಲಾಗಿದೆ. ಅಷ್ಟೇ ಅಲ್ಲದೆ ಸುರಕ್ಷಿತ ವಾತಾವರಣ ಇದ್ದರೆ ಮಾತ್ರ ಟೂರ್ನಿ ಆಯೋಜನೆಗೆ ಮುಂದಾಗುವುದಾಗಿ ಬಿಸಿಸಿಐ ಹೇಳಿಕೆ ನೀಡಿತ್ತು. ಇದೀಗ ಐಪಿಎಲ್ ನಡೆಯದೇ ಇದ್ದರೆ ಆಗುವ ನಷ್ಟದ ಬಗ್ಗೆ ಬೆಳಕು ಚೆಲ್ಲಿರುವ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್, 13ನೇ ಆವೃತ್ತಿಯ ಟೂರ್ನಿ ಈ ವರ್ಷ ರದ್ದಾದರೆ ಬರೋಬ್ಬರಿ 4 ಸಾವಿರ ಕೋಟಿ ರೂ. ಗಳ ನಷ್ಟ ಸಂಭವಿಸಲಿದೆ ಎಂದಿದ್ದಾರೆ.
"ಹಣಕಾಸಿನ ಸ್ಥಿತಿಯನ್ನು ಗಮನಿಸುತ್ತಿದ್ದೇವೆ. ನಮ್ಮಲ್ಲಿ ಎಷ್ಟು ಹಣವಿದೆ ಎಂದು ತಿಳಿದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಐಪಿಎಲ್ ಟೂರ್ನಿಯನ್ನು ಈ ಬಾರಿ ಆಯೋಜಿಸದೇ ಇದ್ದರೆ ಅದರಿಂದ 4000 ಕೋಟಿ ರೂ.ಗಳ ಭಾರಿ ನಷ್ಟ ಸಂಭವಿಸಲಿದೆ," ಎಂದು ಗಂಗೂಲಿ ಹೇಳಿದ್ದಾರೆ.
ಈ ಮುಂಚೆ, ಒಂದು ವೇಳೆ ಐಪಿಎಲ್ ನಡೆದರೆ ನಾವು ಆಟಗಾರರ ವೇತನಕ್ಕೆ ಕತ್ತರಿ ಹಾಕದೆ ಎಲ್ಲವನ್ನು ನಿಭಾಯಿಸಲಿದ್ದೇವೆ, ಐಪಿಎಲ್ ನಡೆಯದಿದ್ದರೇ ಆಟಗಾರರ ವೇತನ ಕಡಿತಗೊಳಿಸುವುದಾಗಿ ಪರೋಕ್ಷವಾಗಿ ಸುಳಿವು ನೀಡಿದ್ದರು. ಆದರೆ ಆಟಗಾರರ ವೇತನ ಕಡಿತವನ್ನು ತಳ್ಳಿಹಾಕಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು, ಆಟಗಾರರ ವೇತನ ಕಡಿತಗೊಳಿಸುವ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ವೇತನ ಕಡಿತದ ಬಗ್ಗೆ ನಾವು ಯಾವುದೇ ಚರ್ಚೆ ನಡೆಸಿಲ್ಲ. ಆರ್ಥಿಕ ಸಂಕಷ್ಟದ ನಡುವೆಯೂ ವೇತನ ನೀಡುವ ಸಾಮರ್ಥ್ಯ ಇದೆ. ಐಪಿಎಲ್ ನಿಂದ ಬಿಸಿಸಿಐಗೆ ದೊಡ್ಡ ನಷ್ಟವಾಗುತ್ತಿದೆ ನಿಜ. ವೇತನ ಕಡಿತ ಅತ್ಯಂತ ಕೊನೆಯ ವಿಚಾರ ಎಂದು ಹೇಳಿದ್ದಾರೆ.
Advertisement