ಬಾರ್ಬೋಡಾಸ್: ಮಾಜಿ ಕ್ರೆಕೆಟಿಗ ರಾಮ್ ನರೇಶ್ ಸರವಣ್ ರನ್ನು ಕೊರೋನಾ ಗಿಂತಲೂ ಅಪಾಯಕಾರಿ ಎಂದು ಕರೆದಿದ್ದ ವಿಂಡೀಸ್ ದೈತ್ಯ ಬ್ಯಾಟ್ಸ್ ಮನ್ ಇದೀಗ ಕ್ಷಮೆ ಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಹೌದು.. ಈ ಹಿಂದೆ ಕೆರಿಬಿಯನ್ ಕ್ರಿಕೆಟ್ ಲೀಗ್ ನಲ್ಲಿನ ಜಮೈಕಾ ತಲಾವಾಸ್ ತಂಡದಿಂದ ತನ್ನನ್ನು ಕೈ ಬಿಡಲು ಸರವಣ್ ಕಾರಣ ಎಂದು ಗೇಯ್ಲ್ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ್ದ ಸರವಣ್ ಗೇಯ್ಲ್ ರನ್ನು ಹಾವು ಎಂದು ತಿರುಗೇಟು ನೀಡಿದ್ದರು. ಇಬ್ಬರು ದೈತ್ಯ ಆಟಗಾರರ ಈ ಬಹಿರಂಗ ವಾಗ್ದಾಳಿ ಸುದ್ದಿಮಾಧ್ಯ್ಮಗಳಲ್ಲಿ ಸುದ್ದಿಗೆ ಗ್ರಾಸವಾಗಿತ್ತು. ಇದರಿಂದ ಸಿಪಿಎಲ್ ಆಡಳಿತ ಮಂಡಳಿ ಶಿಸ್ತು ಕ್ರಮ ಜರುಗಿಸುವ ಕುರಿತು ಸೂಚನೆ ನೀಡಿತ್ತು. ಆದರೆ ಅಷ್ಟರಲ್ಲೇ ಇಡೀ ಪ್ರಹಸನಕ್ಕೆ ಕ್ರಿಸ್ ಗೇಯ್ಲ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರು ಗೇಯ್ಲ್, ನಾನು ನನ್ನ ಯೂಟ್ಯೂಬ್ ಚಾನಲ್ ನಲ್ಲಿ ಹಾಕಿದ್ದ ವಿಡಿಯೋದಲ್ಲಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೆ. ಅಲ್ಲದೆ ಜಮೈಕಾ ತಲ್ಲವಾಸ್ ತಂಡದಿಂದ ನನ್ನನ್ನು ಕೈ ಬಿಡಲು ಕಾರಣವಾದ ಅಂಶಗಳಕುರಿತು ಮಾತನಾಡಿದ್ದೆ. ಅಲ್ಲಿ ನಾನು ಹೇಳಿದ್ದ ಹೇಳಿಕೆಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ತವರಿನ ಅಭಿಮಾನಿಗಳಿಗೆ ನಾನು ತಂಡದಿಂದ ಹೊರ ಹೋಗಲು ಕಾರಣ ಏನು ಎಂಬುದು ತಿಳಿಯಬೇಕು. ನನ್ನ ಸಿಪಿಎಲ್ ಕರಿಯರ್ ಅನ್ನು ನಾನು ನನ್ನ ತವರಿನ ತಂಡದ ಪರವಾಗಿ ತವರಿನ ಕ್ರೀಡಾಂಗಣವಾದ ಸಬೀನಾ ಪಾರ್ಕ್ ನಲ್ಲೇ ಮುಕ್ತಾಯ ಮಾಡಬೇಕು ಎಂದು ಕೊಂಡಿದ್ದೆ ಎಂದು ಹೇಳಿದ್ದಾರೆ.
ಅಂತೆಯೇ ನಾನು ಆಡಿರುವ ಮಾತುಗಳು ನನ್ನ ಹೃದಯದಿಂದ ಬಂದ ಮಾತುಗಳಾಗಿದ್ದು, ಭಾವುಕ ಮಾತುಗಳಾಗಿರಬಹುದು. ಆದರೆ ಇಂತಹ ಹೇಳಿಕೆಗಳು ಕ್ರಿಕೆಟ್ ಮತ್ತು ಸಿಪಿಎಲ್ ಬ್ರಾಂಡ್ ಗೆ ಕೆಟ್ಟ ಹೆಸರು ತರುತ್ತದೆ. ಕಳೆದ 7 ವರ್ಷಗಳಿಂದ ಕೆರಿಬಿಯನ್ ಕ್ರಿಕೆಟ್ ಪ್ರಿಯರಿಗೆ ನಾನು ಮನರಂಜನೆ ನೀಡುವ ಅವಕಾಶ ನೀಡಲಾಗಿದೆ. ಇಂತಹ ಅವಕಾಶವನ್ನು ನಾನು ನನ್ನ ಸ್ವಇಚ್ಛೆಗೆ ಬಂದಂತೆ ಬಳಸಿಕೊಳ್ಳಬಾರದು. ಹೀಗಾಗಿ ಸರವಣ್ ಬಳಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಗೇಯ್ಲ್ ಹೇಳಿದ್ದಾರೆ.
ಇನ್ನು ಕ್ರಿಸ್ ಗೇಯ್ಲ್ ಈ ಬಾರಿಯ ಸಿಪಿಎಲ್ ನಲ್ಲಿ ಸೆಂಟ್ ಲೂಸಿಯಾ ಝೌಕ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದು, ಮುಂಬರುವ ಆಗಸ್ಟ್ ನಲ್ಲಿ ಟೂರ್ನಿ ಆರಂಭಗೊಳ್ಳಬೇಕಿದೆ. ಅಂತೆಯೇ ಇದು ಕ್ರಿಸ್ ಗೇಯ್ಲ್ ಗೆ ಅಂತಿಮ ಸಿಪಿಎಲ್ ಟೂರ್ನಿ ಎಂದೂ ಹೇಳಲಾಗುತ್ತಿದೆ.
Advertisement