ನವದೆಹಲಿ: ಟೀಮ್ ಇಂಡಿಯಾಗೆ ಎಂಎಸ್ ಧೋನಿ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಮೊಹಮ್ಮದ್ ಕೈಫ್ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿದ್ದರು. ಅಷ್ಟೇ ಅಲ್ಲದೆ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್ಮನ್ ಹಾಗೂ ತಂಡ ಶ್ರೇಷ್ಠ ಫೀಲ್ಡರ್ ಎನಿಸಿಕೊಂಡಿದ್ದರು.
ರಂಜಾನ್ ದಿನದಂದು ಭಾರತ ತಂಡವನ್ನು ತಮ್ಮ ಮನಗೆ ಔತಣಕ್ಕೆಂದು ಮೊದಲ ಬಾರಿ ಆಹ್ವಾನಿಸಿದ ಘಟನೆಯನ್ನು ಸ್ಮರಿಸಿರುವ ಕೈಫ್, ಈ ಸಂದರ್ಭದಲ್ಲಿ ತಮ್ಮನ್ನು ಸರಿಯಾಗಿ ಸತ್ಕಾರ ಮಾಡದೇ ಇರುವುದಕ್ಕೆ ಧೋನಿ ಬೇಸರ ವ್ಯಕ್ತ ಪಡಿಸಿದ್ದರು ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಇದೇ ಕಾರಣಕ್ಕೆ ನನಗೆ ಭಾರತ ತಂಡಕ್ಕೆ ಮರಳಿ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲೇ ಇಲ್ಲ ಎಂದು ತಮಾಷೆ ಕೂಡ ಮಾಡಿದ್ದಾರೆ.
"2006ರಲ್ಲಿ ನೊಯ್ಡಾದಲ್ಲಿ ಇದ್ದ ನಮ್ಮ ಮನೆಗೆ ಭಾರತ ತಂಡವನ್ನು ಆಹ್ವಾನಿಸಿದ್ದೆ. ಗ್ರೇಗ್ ಚಾಪೆಲ್, ಸೌರವ್ ಗಂಗೂಲಿ ಎಲ್ಲರನ್ನೂ ಆಹ್ವಾನಿಸಿದ್ದೆ. ದೊಡ್ಡ ಆಟಗಾರರೆಲ್ಲಾ ಬಂದಿದ್ದ ಕಾರಣ ಕೊಂಚ ತಡವರಿಸುತ್ತಿದ್ದೆ. ಸಚಿನ್ ಮತ್ತು ಇತರ ದಿಗ್ಗಜರ ಆರೈಕೆಯಲ್ಲಿ ತೊಡಗಿದ್ದೆ," ಎಂದು ತಮ್ಮ ನೆನಪಿನಾಳ ಕೆದಕಿದ್ದಾರೆ.
ಆ ಸಂದರ್ಭದಲ್ಲಿ ಭಾರತ ತಂಡದ ಕಿರಿಯ ಆಟಗಾರರಾದ ಎಂಎಸ್ ಧೋನಿ, ಸುರೇಶ್ ರೈನಾ ಸೇರಿದಂತೆ ಮೊದಲಾದ ಆಟಗಾರರು ಪ್ರತ್ಯೇಕ ಕೊಠಡಿಯೊಂದರಲ್ಲಿ ಉಳಿದಿದ್ದರು. ಆಗ ಅವರತ್ತ ಹೆಚ್ಚು ಗಮನ ನೀಡದೇ ಇರುವುದಕ್ಕೆ ಧೋನಿ ತಮಾಷೆಯಿಂದ ದೂರು ಹೇಳಿದ್ದರು. ಅಂದು ಧೋನಿಗೆ ಸರಿಯಾಗಿ ಬಿರಿಯಾನಿ ಬಡಿಸದೇ ಇದ್ದ ಕಾರಣಕ್ಕೆ 2007ರಲ್ಲಿ ಧೋನಿ ನಾಯಕನಾದ ನಂತರ ನನಗೆ ಕಮ್ಬ್ಯಾಕ್ ಮಾಡುವ ಅವಕಾಶ ಸಿಗಲೇ ಇಲ್ಲ ಎಂದು ಕೈಫ್ ತಮಾಷೆ ಮಾಡಿದ್ದಾರೆ.
Advertisement