ನವದೆಹಲಿ: ಕಳೆದ 10 ವರ್ಷಗಳಲ್ಲಿ ಕ್ರಿಕೆಟ್ ಆಟವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಂಪೂರ್ಣ ನಾಶ ಮಾಡಿದ್ದು, ಮಂಡಿಯೂರಿ ನಿಲ್ಲುವಂತಹ ಪರಿಸ್ಥಿತಿ ತಂದೊಡ್ಡಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗುಡುಗಿದ್ದಾರೆ.
ಇಎಸ್ಪಿಎನ್ ಕ್ರಿಕ್ಇನ್ಫೋ ಸಲುವಾಗಿ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ನಡೆಸಿಕೊಟ್ಟ ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಖ್ತರ್, ಜಾಗತಿಕ ಕ್ರಿಕೆಟ್ ಸಂಸ್ಥೆಯ ಕಡೆಗೆ ಬೌನ್ಸರ್ ಎಸೆದಿದ್ದಾರೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಸ್ನೇಹಿ ಆಟವಾಗುವಂತೆ ನಿಯಮಗಳನ್ನು ತಂದಿರುವುದನ್ನು ಅಖ್ತರ್ ಕಟುವಾಗಿ ಟೀಕಿಸಿದ್ದಾರೆ.
ಇತ್ತೀಚೆಗೆ ಅದರಲ್ಲೂ ಟಿ20 ಕ್ರಿಕೆಟ್ನಲ್ಲಿ ವೇಗದ ಬೌಲರ್ಗಳು ಮಂದಗತಿಯ ಎಸೆತಗಳ ಮೊರೆ ಹೋಗುತ್ತಿದ್ದು, ಸ್ಪಿನ್ನರ್ಗಳು ವೇಗವಾಗಿ ಎಸೆಯುವ ಪ್ರಯತ್ನ ಮಾಡುತ್ತಿದ್ದು ಈ ಪ್ರವೃತ್ತಿ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳುವಂತೆ ಸಂಜಯ್ ಕೇಳಿದ್ದಕ್ಕೆ ಅಖ್ತರ್ ಖಾರದ ಉತ್ತರ ನೀಡಿದ್ದಾರೆ.
ಐಸಿಸಿ ಕ್ರಿಕೆಟ್ ಆಟವನ್ನು ನಾಶಮಾಡಲು ನಿಂತಿದೆ. ಕಳೆದ 10 ವರ್ಷಗಳಿಂದ ನಾನು ಇದನ್ನು ಮುಕ್ತವಾಗಿ ಹೇಳುತ್ತಾ ಬಂದಿದ್ದೇನೆ. ಐಸಿಸಿ ಕ್ರಿಕೆಟ್ ಹಾಳು ಮಾಡಲು ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡಿದ್ದೀರಿ ಎಂದು ಶಭಾಷ್ ಎನ್ನಬಲ್ಲೆ ಅಷ್ಟೆ. ಅಂದುಕೊಂಡದ್ದನ್ನು ಮಾಡಿದ್ದೀರಿ ಎಂದು ಅಖ್ತರ್ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಓವರ್ಗೆ ಎರಡು ಬೌನ್ಸರ್ಗಳ ಬದಲಿಗೆ ಮೂರು ಬೌನ್ಸರ್ಗಳಿಗೆ ಅನುವು ಮಾಡಬೇಕು ಎಂದು ಅಖ್ತರ್ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ ನ ಫೀಲ್ಡಿಂಗ್ ನಿಯಮಗಳಲ್ಲೂ ಬದಲಾವಣೆ ಆಗಬೇಕು ಎಂದಿದ್ದಾರೆ.
Advertisement