ನವದೆಹಲಿ: ಟೀಂ ಇಂಡಿಯಾಗೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ಅಪ್ರತಿಮ ನಾಯಕ ಎಂಎಸ್ ಧೋನಿ ಅವರ ನಿವೃತ್ತಿ ವಿಚಾರ ಇನ್ನೂ ನಿಗೂಢವಾಗಿದೆ. ಕಳೆದ ವರ್ಷ ಜುಲೈನಿಂದ ಕ್ರಿಕೆಟ್ ಅಂಗಣದಲ್ಲಿ ಕಾಣಿಸಿಕೊಳ್ಳದ ಕ್ಯಾಪ್ಟನ್ ಕೂಲ್ ಬುಧವಾರ ಹಠಾತ್ ನಿವೃತ್ತಿ ಘೋಷಿಸಿದ್ದಾರೆ ಎಂಬ ವದಂತಿಯು ಸೋಷಿಯಲ್ ಮೀಡಿಯಾಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿತ್ತು.
ಅಂದಹಾಗೆ ಎಂಎಸ್ ಧೋನಿ ನಿವೃತ್ತಿ ಕೇವಲ ವದಂತಿಯಷ್ಟೆ. ಈ ರೀತಿಯ ವದಂತಿ ಹಬ್ಬಿಸುವ ಬದಲು ಬೇರೆ ಕೆಲಗಳನ್ನು ಏನಾದರೂ ಮಾಡಿ ಎಂದು ಸಾಕ್ಷಿ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರನ್ನು ಜಾಡಿಸಿದ್ದರು.
ಟೀಂ ಇಂಡಿಯಾ ಪರ 90 ಟೆಸ್ಟ್, 350 ಏಕದಿನ ಮತ್ತು 98 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಧೋನಿ, ಮರಳಿ ಭಾರತ ತಂಡದ ಪರ ಆಡುವುದಿಲ್ಲವೆ? ಈ ಪ್ರಶ್ನೆಗೆ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಭಾರತ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಉತ್ತರಿಸಿದ್ದಾರೆ.
ಎಂಎಸ್ (ಧೋನಿ) ಅದ್ಭುತ ಆಟಗಾರ. ಬುದ್ಧವಂತಿಕೆ, ಶಾಂತ ಸ್ವಭಾವ, ಸಾಮರ್ಥ್ಯ, ವೇಗ ಮತ್ತು ಚುರುಕಿನಲ್ಲಿ ಎತ್ತಿದ ಕೈ. ಜೊತೆಗೆ ಮ್ಯಾಚ್ ವಿನ್ನರ್ ಕೂಡ. ಈ ಎಲ್ಲಾ ಗುಣಗಳಿಂದ ಅವರು ಆಧುನಿಕ ಕ್ರಿಕೆಟ್ನ ಶ್ರೇಷ್ಠ ಆಟಗಾರನಾಗಿ ಕಾಣಿಸುತ್ತಾರೆ. ಹೀಗಾಗಿ ಸ್ವಯಿಚ್ಛೆಯಿಂದ ನಿವೃತ್ತಿ ಹೊಂದುವ ಅಧಿಕಾರ ಸಂಪಾದಿಸಿದ್ದಾರೆ. ಅವರು ಏನು ಮಾಡಬೇಕು ಎಂಬುದನ್ನು ಯಾರೊಬ್ಬರು ಹೇಳುವುದು ಸರಿಯಲ್ಲ" ಎಂದು ಕರ್ಸ್ಟನ್ ಹೇಳಿದ್ದಾರೆ.
Advertisement