ಅಬುದಾಬಿ: ಕೊನೆಯ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೈ ಆಫ್ ಗೇರುವ ನಿರೀಕ್ಷೆ ಮೂಡಿಸಿದ್ದ ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಯುವ ಆಟಗಾರ ರುತುರಾಜ್ ಗಯಾಕ್ವಾಡ್ (ಅಜೇಯ 62) ಇವರು ಟೂರ್ನಿಯಲ್ಲಿ ಬಾರಿಸಿದ ಸತತ ಮೂರನೇ ಅರ್ಧಶತಕ ಹಾಗೂ ಲುಂಗಿ ಗಿಡಿ (39ಕ್ಕೆ 3) ಅವರ ಬಿಗುವಿನ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿ, ಗೆಲುವಿನ ಮೂಲಕ ಅಭಿಯಾನ ಮುಗಿಸಿದೆ.
ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 153 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸಿಎಸ್ ಕೆ 18.5 ಓವರ್ ಗಳಲ್ಲಿ 1 ವಿಕೆಟ್ ಗೆ 154 ರನ್ ಕಲೆ ಹಾಕಿ ಅಬ್ಬರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಇನ್ನು ಕಿಂಗ್ಸ್ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದು, ಮುಂದಿನ ಹಂತದ ರೇಸ್ ನಿಂದ ದೂರ ಸರಿದಿದೆ.
ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡದ ಸ್ಟಾರ್ ಆಟಗಾರ ರುತುರಾಜ್ ಹಾಗೂ ಫಾಫ್ ಡುಪ್ಲೇಸಿಸ್ ಅವರು ಮೊದಲ ವಿಕೆಟ್ ಗೆ 82 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡ ಗೆಲುವಿನ ನಗೆ ಬೀರುವಲ್ಲಿ ಶ್ರಮಿಸಿತು.
Advertisement