ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಇಶಾಂತ್ ಶರ್ಮಾ ಹೊರಕ್ಕೆ!
ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಿಂದ ಭಾರತ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಹೊರನಡೆದಿದ್ದಾರೆ. ಮತ್ತೊಂದೆಡೆ ಸೀಮಿತ ಓವರ್ಗಳ ಸರಣಿಗೆ ಅಲಭ್ಯರಾಗಿರುವ ರೋಹಿತ್ ಶರ್ಮಾ, ಟೆಸ್ಟ್ ಸರಣಿಗೆ ಲಭ್ಯರಾಗುವ ಸುಳಿವು ಇನ್ನೂ ಸಿಕ್ಕಿಲ್ಲ. ಆದರೆ, ಡಿಸೆಂಬರ್ 11 ರಂದು ಬಿಸಿಸಿಐ ಈ ಬಗ್ಗೆ ಸ್ಪಷ್ಟತೆ ನೀಡಲಿದೆ.
Published: 27th November 2020 03:31 PM | Last Updated: 27th November 2020 03:31 PM | A+A A-

ಇಶಾಂತ್ ಶರ್ಮಾ
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಿಂದ ಭಾರತ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಹೊರನಡೆದಿದ್ದಾರೆ. ಮತ್ತೊಂದೆಡೆ ಸೀಮಿತ ಓವರ್ಗಳ ಸರಣಿಗೆ ಅಲಭ್ಯರಾಗಿರುವ ರೋಹಿತ್ ಶರ್ಮಾ, ಟೆಸ್ಟ್ ಸರಣಿಗೆ ಲಭ್ಯರಾಗುವ ಸುಳಿವು ಇನ್ನೂ ಸಿಕ್ಕಿಲ್ಲ. ಆದರೆ, ಡಿಸೆಂಬರ್ 11 ರಂದು ಬಿಸಿಸಿಐ ಈ ಬಗ್ಗೆ ಸ್ಪಷ್ಟತೆ ನೀಡಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂದಿನಿಂದ ಸೀಮಿತ ಓವರ್ಗಳ ಸರಣಿಯಲ್ಲಿ ಮುಖಾಮುಖಿಯಾಗಿವೆ. ಈ ಹಿಂದೆ ನಡೆದಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆಯಲ್ಲಿಯೇ ಇಶಾಂತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರು. ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ, ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಇಶಾಂತ್ ಶರ್ಮಾ ಭಾರತ ಟೆಸ್ಟ್ ತಂಡದಲ್ಲಿ ದೀರ್ಘ ಕಾಲವಾಡಿದ್ದಾರೆ. 31ರ ಪ್ರಾಯದ ಬಲಗೈ ವೇಗಿ 97 ಟೆಸ್ಟ್ ಪಂದ್ಯಗಳಿಂದ 297 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕೊನೆಯ ಬಾರಿ ಕೈಗೊಂಡಿದ್ದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಶಾಂತ್ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಇದೀಗ ಅಲಭ್ಯರಾಗಿರುವುದು ಭಾರತಕ್ಕೆ ತುಂಬಾ ನಷ್ಟವಾಗಲಿದೆ.
ಇಶಾಂತ್ ಶರ್ಮಾ ಅಲಭ್ಯತೆಯಿಂದ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಮರಳಿರುವುದರಿಂದ ಆತಿಥೇಯರ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಜತೆಗೆ ಮಾರ್ನಸ್ ಲಾಬುಶೇನ್ ಉಪಸ್ಥಿತಿ ಆಸೀಸ್ ಪಾಲಿಗೆ ಬ್ಯಾಟಿಂಗ್ ವಿಭಾಗಕ್ಕೆ ಬೋನಸ್ ಸಿಕ್ಕಂತಾಗಿದೆ.
ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅಲಭ್ಯತೆ ಹಾಗೂ ಇಶಾಂತ್ ಇಲ್ಲದೇ ಇರುವುದು ಭಾರತ ತಂಡದ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಹಿಟ್ಮ್ಯಾನ್ ಖ್ಯಾತಿಉ ರೋಹಿತ್ ಶರ್ಮಾ ಟೆಸ್ಟ್ ಸರಣಿಯ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೂ, ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ಕೂಡ ಏನೂ ಹೇಳಿಲ್ಲ.
ಇತ್ತೇಚಿನ ಬೆಳವಣಿಗೆಗಳ ಪ್ರಕಾರ ಡಿಸೆಂಬರ್ 11 ರಂದು ಈ ಎಲ್ಲಾ ಅನುಮಾನಗಳಿಗೂ ಬಿಸಿಸಿಐ ತೆರೆ ಎಳೆಯಲಿದೆ. ತನ್ನ ತಂದೆ ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಮುಂಬೈಗೆ ಹೋಗಿದ್ದಾರೆ ಮತ್ತು ಅವರ ತಂದೆ ಚೇತರಿಸಿಕೊಂಡ ನಂತರ ಬೆಂಗಳೂರಿಗೆ ಬಂದು ಪುನಶ್ಚೇತನ ಕಾರ್ಯದಲ್ಲಿ ರೋಹಿತ್ ಭಾಗಿಯಾಗಲು ಬಿಸಿಸಿಐ ಅವಕಾಶ ಕಲ್ಪಿಸಿದೆ.