ಚೆನ್ನೈ: ಕೊರೋನಾ ಮಹಾಮಾರಿ ನಡುವೆಯೂ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಯುತ್ತಿದ್ದು ಅಲ್ಲಿಂದ ನೆರವಾಗಿ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಸರಣಿಗಾಗಿ ಪ್ರವಾಸ ಕೈಗೊಳ್ಳಲಿದ್ದಾರೆ.
ಕೊರೋನಾದಿಂದಾಗಿ ಆಸ್ಟ್ರೇಲಿಯಾ ಪ್ರವಾಸದ ಮೇಲೆ ಅನಿಶ್ಚಿತತೆ ಕಾಡುತ್ತಿತ್ತು. ಇದೀಗ ಟೂರ್ನಿ ನಡೆಯುವ ಸಾಧ್ಯತೆಗಳು ಕಾಣಿಸುತ್ತಿದ್ದು ಇದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಪ್ರವಾಸದ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಕಳುಹಿಸಿದ್ದು ಇದರಲ್ಲಿ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳಬಹುದು ಎಂದು ಹೇಳಿದೆ.
ಬ್ರಿಸ್ಬೇನ್ ನಲ್ಲಿ ನವೆಂಬರ್ ಕೊನೆಯ ವಾರದಿಂದ ಮೂರು ಟಿ20 ಐಗಳೊಂದಿಗೆ ಸರಣಿ ಪ್ರಾರಂಭವಾಗಲಿದ್ದು, ನಂತರ ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮುಂಬರುವ ದಿನಗಳಲ್ಲಿ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಆಸ್ಟ್ರೇಲಿಯಾದ ಅಧಿಕಾರಿಗಳು ಕ್ರೀಡಾಂಗಣಗಳಿಗೆ ಪ್ರೇಕ್ಷಕರನ್ನು ಅನುಮತಿಸುವ ಸಾಧ್ಯತೆಯಿದೆ.
ಟೆಸ್ಟ್ ಆಟಗಾರರಾದ ಚೇತೇಶ್ವರ ಪೂಜಾರ, ಹನುಮಾ ವಿಹಾರಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ನೇತೃತ್ವದ ಸಹಾಯಕ ಸಿಬ್ಬಂದಿ ಈ ತಿಂಗಳ ಕೊನೆಯಲ್ಲಿ ದುಬೈಗೆ ತೆರಳಲಿದ್ದು, ಕ್ವಾರಂಟೈನ್ ಗೆ ಒಳಗಾಗುತ್ತಾರೆ. ಐಪಿಎಲ್ ಪ್ಲೇ-ಆಫ್ ಮುಗಿಸಿದ ಆಟಗಾರರ ಒಂದು ಬ್ಯಾಚ್ ನವೆಂಬರ್ 4ರೊಳಗೆ ಸಹಾಯಕ ಸಿಬ್ಬಂದಿಯೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳುತ್ತಾರೆ ಎಂದು ತಿಳಿದುಬಂದಿದೆ. ಉಳಿದವರು ನವೆಂಬರ್ 10 ರಂದು ಫೈನಲ್ ಪಂದ್ಯದ ನಂತರ ಹೊರಡುತ್ತಾರೆ.
ಆಟಗಾರರು ತಮ್ಮ ಕುಟುಂಬಗಳನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಬಯಸಿದರೆ, ಅವರೂ ಸಹ ಇತರರಂತೆ ದುಬೈ ಮೂಲಕ ಹೋಗಬೇಕು ಮತ್ತು ತಂಡದ ಉಳಿದವರೊಂದಿಗೆ ಬೆರೆಯಲು ಅನುಮತಿಸುವ ಮೊದಲು ಪ್ರತ್ಯೇಕ ಹೋಟೆಲ್ನಲ್ಲಿ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.
Advertisement