ಶಾರ್ಜಾ: ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮುಂಬೈ ಗೆಲುವಿಗೆ ಕಾರಣವಾದ ಸೂರ್ಯಕುಮಾರ್ ಯಾದವ್ ರನ್ನು ಸ್ಲೆಡ್ಜ್ ಮಾಡುವ ಮೂಲಕ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಹೌದು.. ನಿನ್ನೆಯ ಪಂದ್ಯದಲ್ಲಿ ಮುಂಬೈ ತಂಡದ ಸೂರ್ಯ ಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಸೂರ್ಯಕುಮಾರ್ ಅವರ ವಿಕೆಟ್ ಉರುಳಿಸಲು ಕೊಹ್ಲಿ ಕೈಗೊಂಡ ಎಲ್ಲ ಯೋಜನೆಗಳೂ ವಿಫಲವಾಗಿದ್ದವು. ಈ ನಡುವೆ ವಿಕೆಟ್ ಉರುಳದ ಹಿನ್ನಲೆಯಲ್ಲಿ ಹತಾಶರಾದಂತೆ ಕಂಡುಬಂದ ಕೊಹ್ಲಿ ಸೂರ್ಯಕುಮಾರ್ ಯಾದವ್ ಅವರ ಬಳಿ ಹೋಗಿ ಅವರನ್ನು ನಿಂದಿಸುವ ಪ್ರಯತ್ನ ಮಾಡಿದ್ದಾರೆ. ಸೂರ್ಯ ಕುಮಾರ್ ಹೊಡೆದ ಬಾಲ್ ವಿರಾಟ್ ಕೈ ಸೇರಿತ್ತು. ಈ ವೇಳೆ ಬಾಲ್ ಹಿಡಿದ ವಿರಾಟ್ ಅದನ್ನು ಕೀಪರ್ ಬಳಿ ಎಸೆದಿದ್ದಾರೆ. ಅಲ್ಲದೆ, ಸಿಟ್ಟಿನಿಂದ ಏನನ್ನೋ ಹೇಳಿದ್ದಾರೆ.
ಈ ವೇಳೆ ಶಾಂತವಾಗಿಯೇ ವರ್ತಿಸಿದ ಸೂರ್ಯಕುಮಾರ್ ಯಾದವ್, ಕೊಹ್ಲಿ ಅವರನ್ನೂ ಲೆಕ್ಕಿಸದೇ ಮುಂದೆ ಹೋಗಿ ಸಹ ಬ್ಯಾಟ್ಸಮನ್ ಜೊತೆ ಚರ್ಚೆಯಲ್ಲಿ ತೊಡಗಿದರು. ಇವಿಷ್ಟೂ ವಿಡಿಯೋ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಕೊಹ್ಲಿ ವರ್ತನೆ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಜೆಂಟಲ್ ಮನ್ ಗೇಮ್ ನಲ್ಲಿ ಇಂತಹ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಸೂರ್ಯ ಕುಮಾರ್ ಅವರು ತೋರಿದ ತಾಳ್ಮೆಗೂ ಅಭಿಮಾನಿಗಳು ಫಿದಾ ಆಗಿದ್ದು, ಸೂರ್ಯ ಕುಮಾರ್ ಶಾಂತವಾಗಿಯೇ ಕೊಹ್ಲಿಗೆ ತಿರುಗೇಟು ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಇನ್ನು ಸೂರ್ಯ ಕುಮಾರ್ ಯಾದವ್ ನಿನ್ನೆ 49 ಎಸೆತಗಳಲ್ಲಿ 79ರನ್ ಸಿಡಿಸಿದ್ದರು.
ಇದೇ ವೇಳೆ ಸೂರ್ಯಕುಮಾರ್ ಯಾದವ್ಗೆ ಆಸ್ಟ್ರೇಲಿಯಾ ಟೂರ್ನಲ್ಲಿ ಟೀಂ ಇಂಡಿಯಾಗೆ ಆಯ್ಕೆ ಆಗದೆ ಇರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆಯ್ಕೆ ಸಮಿತಿಯಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಅವರಿಗೆ ಅವಕಾಶ ನೀಡುವಂತೆ ಬಿಸಿಸಿಐಗೆ ಹೇಳಬಹುದಿತ್ತು ಎಂದು ಅನೇಕರು ಒತ್ತಾಯಿಸಿದ್ದಾರೆ.
Advertisement