ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿಯೇ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದರೆ, ಮೂರು ಬಾರಿ ಫೈನಲ್ ತಲುಪಿತ್ತಾದರೂ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಉತ್ತಮ ಸಮತೋಲನದೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ 13ನೇ ಆವೃತ್ತಿಯ ಐಪಿಎಲ್ಗೆ ಕಣಕ್ಕೆ ಇಳಿಯುತ್ತಿದೆ.
ಈ ಬಾರಿ ಚೊಚ್ಚಲ ಐಪಿಎಲ್ ಗೆಲ್ಲುವ ತುಡಿತ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೆಲ ಸ್ಟಾರ್ ಆಟಗಾರರನ್ನು ಖರೀದಿಸಿದೆ. ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆರೋನ್ ಫಿಂಚ್ ಹಾಗೂ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ಅವರನ್ನು ಸೇರಿಸಿಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೇಸನ್ ಡೈರೆಕ್ಟರ್ ಆಗಿ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಸೇರ್ಪಡೆಯಾಗಿದ್ದು, ಇದು ತಂಡವನ್ನು ತಾಂತ್ರಕವಾಗಿ ಬಲಿಷ್ಟಗೊಳಿಸಲು ನೆರವಾಗಬಹುದು.
ಆರ್ಸಿಬಿ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ , ಬೆಂಗಳೂರು ಫ್ರಾಂಚೈಸಿ ಐಪಿಎಲ್ ಗೆಲ್ಲುವುದು ಒಗಟಾಗಿದೆ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರನ್ನು ಹೊಂದಿರುವ ತಂಡಕ್ಕೆ ರನ್ ಗಳ ಕೊರತೆ ಇರುವುದಿಲ್ಲ, ಅದು ಸಮಸ್ಯೆಯೂ ಇರಬಹುದು, ಇವರಿಬ್ಬರು ವಿಫಲರಾದಾಗ ಬೇರೆಯವರು ಸರಿಯಾಗಿ ಆಟ ಆಡಲ್ಲ, ಈಗ ಹೊಸ ಕೋಚ್ ಇದ್ದು, ಈ ವರ್ಷ ಅವರು ಪ್ರಶಸ್ತಿ ಗೆಲ್ಲಬಹುದು ಎಂದು ಸ್ಪೂರ್ಟ್ಸ್ ಸ್ಟಾರ್ ಅಂಕಣದಲ್ಲಿ ಬರೆದಿದ್ದಾರೆ.
ಯುಎಇಯಲ್ಲಿನ ಪಿಚ್ ಗಳಲ್ಲಿ ಲೆಗ್ ಸ್ಪೀನರ್ ಯುಜುವೇಂದ್ರ ಚಾಹೆಲ್ ಆರ್ ಸಿಬಿಯ ಮ್ಯಾಚ್ ವಿನ್ನರ್ ಆಗಬಹುದು ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ದುಬೈನಲ್ಲಿ ಸೆಪ್ಟೆಂಬರ್ 21 ರಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಎದುರು ಆರ್ ಸಿಬಿ ಸೆಣಸಾಟ ನಡೆಸಲಿದೆ.
Advertisement