ನವದೆಹಲಿ: ಗುರುವಾರ ರಾತ್ರಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆ ಮಾಡಲಾಗದಷ್ಟು ಹೀನಾಯವಾಗಿ ಸೋಲು ಅನುಭವಿಸಿತ್ತು. 207 ರನ್ ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ 97 ರನ್ಗಳ ಭಾರಿ ಅಂತರದಲ್ಲಿ ಮಕಾಡೆ ಮಲಗಿತ್ತು. ಪಂದ್ಯದ ಬಳಿಕ ಸೋಲಿಗೆ ಕಾರಣವನ್ನು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.
ಪಂದ್ಯದಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಕ್ಯಾಚ್ಗಳನ್ನು ಕೈ ಚೆಲ್ಲಿದ್ದು ಆರ್ಸಿಬಿ ತಂಡ ದುಬಾರಿ ಬೆಲೆ ಕಟ್ಟಬೇಕಾಯಿತು. ಅಲ್ಲದೆ, ಬ್ಯಾಟಿಂಗ್ನಲ್ಲಿ ಬಹಳಷ್ಟು ನಿರೀಕ್ಷೆ ಇಟ್ಟಿದ್ದ ಆರ್ಸಿಬಿ ನಾಯಕ ಕೇವಲ ಒಂದೇ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುತ್ತಿದ್ದ ವಿರಾಟ್ ಕೊಹ್ಲಿ, ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಜಾಶ್ ಫಿಲಿಪ್ಗೆ ಮೂರನೇ ಕ್ರಮಾಂಕ ನೀಡಿ, ತಾವು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ಅಲ್ಲದೆ, ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಕೊಹ್ಲಿ, ವಿಕೆಟ್ ಮಂಜು ಇರುವುದರಿಂದ ವಿಕೆಟ್ ಫ್ರೆಶ್ ಇರಲಿದೆ ಎಂಬ ಭಾವನೆಯೊಂದಿಗೆ ಅವರು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು.
Advertisement