ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಹಾಲಿ ಐಪಿಎಲ್ ಟೂರ್ನಿಯ ನಂಬರ್ 1 ಬ್ಯಾಟ್ಸ್ ಮನ್ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಗುರುವಾರ ರಾತ್ರಿ ನಡೆದಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. 69 ಎಸೆತಗಳನ್ನು ಎದುರಿಸಿದ್ದ ಕರ್ನಾಟಕ ಬ್ಯಾಟ್ಸ್ಮನ್ ಅಜೇಯ 132 ರನ್ಗಳನ್ನು ಗಳಿಸುವ ಮೂಲಕ ತಮ್ಮ ತಂಡ 206 ರನ್ಗಳಿಸುವಲ್ಲಿ ನೆರವಾಗಿದ್ದರು.
ನಂತರ ಗುರಿ ಹಿಂಬಾಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟ್ ಆಗಿ, 97 ರನ್ಗಳಿಂದ ಸೋಲು ಒಪ್ಪಿಕೊಂಡಿತ್ತು. ಆ ಮೂಲಕ ಪ್ರಸಕ್ತ ಆವೃತ್ತಿಯ ಆರ್ಸಿಬಿ ಮೊದಲ ಸೋಲು ಅನುಭವಿಸಿತ್ತು. ಕೆ.ಎಲ್ ರಾಹುಲ್ ಗಳಿಸಿದ್ದ ವೈಯಕ್ತಿಕ ದೊಡ್ಡ ಮೊತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೆ.ಎಲ್ ರಾಹುಲ್ ಅವರನ್ನು ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಇಯಾನ್ ಬಿಷಪ್ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಗೌತಮ್ ಗಂಭೀರ್ ಶ್ಲಾಘಿಸಿದ್ದರು.
ಕೆ.ಎಲ್ ರಾಹುಲ್-ರೋಹಿತ್ ಶರ್ಮಾ ಎದುರು ಆಡುವುದೆಂದರೆ ಭಯ
ಇದೇ ವೇಳೆ ತಮಗೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಎಂದರೆ ಭಯ ಎಂದು ಗಂಭೀರ್ ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 2 ಬಾರಿ ಪ್ರಸಸ್ತಿ ಗೆದ್ದುಕೊಟ್ಟ ಮಾಜಿ ನಾಯಕ ಗೌತಮ್ ಗಂಭೀರ್, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎದುರಾಳಿಯಾಗಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿ'ವಿಲಿಯರ್ಸ್ ವಿರುದ್ಧ ಆಡುವುದಕ್ಕಿಂತಲೂ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ವಿರುದ್ಧ ಆಡುವುದು ಭಯ ಹುಟ್ಟಿಸುತ್ತದೆ ಎಂದು ಗಂಭೀರ್ ತಮ್ಮ ಮನದಾಳ ತೋಡಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ 69 ಎಸೆತಗಳಲ್ಲಿ 132 ರನ್ ಬಾರಿಸಿದ ಬಳಿಕ ಗಂಭೀರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಪಂಜಾಬ್ ತಂಡ 97 ರನ್ಗಳ ಬೃಹತ್ ಗೆಲುವು ದಾಖಲಿಸಿತ್ತು.
Advertisement