ನವದೆಹಲಿ: ಮುಂದಿನ ಪಂದ್ಯಕ್ಕೆ ಗ್ಲೂಕೋಸ್ ತೆಗೆದುಕೊಂಡು ಹೋಗಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಲೆಳೆದಿದ್ದಾರೆ.
ಐಪಿಎಲ್ 2020 ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ 2ನೇ ಸೋಲು ಕಂಡಿದ್ದು, ನಿನ್ನೆ ದೆಹಲಿ ವಿರುದ್ಧ ಬರೊಬ್ಬರಿ 44 ರನ್ ಗಳ ಹೀನಾಯ ಸೋಲು ಕಂಡಿದೆ. ಚೆನ್ನೈ ತಂಡದ ಕಳಪೆ ಪ್ರದರ್ಶನದ ವಿಚಾರವಾಗಿ ಸೆಹ್ವಾಗ್ ಪರೋಕ್ಷ ವ್ಯಂಗ್ಯ ಮಾಡಿದ್ದು ಮುಂದಿನ ಪಂದ್ಯಕ್ಕೆ ಸುಸ್ತಾಗದೇ ಇರಲು ಗ್ಲೂಕೋಸ್ ತೆಗೆದುಕೊಂಡು ಹೋಗಿ ಎಂದು ಮೂದಲಿಸಿದ್ದಾರೆ,
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನ ಬ್ಯಾಟ್ಸ್ಮನ್ಗಳು ತೋರಿಸುತ್ತಿರುವ ಕಳಪೆ ಪ್ರದರ್ಶನವನ್ನು ಗೇಲಿ ಮಾಡಿರುವ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ಪಂದ್ಯಕ್ಕೂ ಮೊದಲು ಗ್ಲೂಕೋಸ್ ತೆಗೆದುಕೊಂಡು ಬರುವಂತೆ ಧೋನಿ ನೇತೃತ್ವದ ತಂಡಕ್ಕೆ ಸಲಹೆ ನೀಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸೆಹ್ವಾಗ್ 'ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ಮನ್ಗಳು ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವರು ಗ್ಲೂಕೋಸ್ ತೆಗೆದುಕೊಳ್ಳಬೇಕಾಗಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆ ದೆಹಲಿ ಕ್ಯಾಪಿಟಲ್ಸ್ ನೀಡಿದ್ದ 176ರನ್ ಚೆಸ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ7 ವಿಕೆಟ್ ಕಳೆದುಕೊಂಡು ಕೇವಲ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಧೋನಿ ಮತ್ತೆ 6ನೇ ಕ್ರಮಾಂಕದಲ್ಲಿ ಆಡಲು ಬಂದರು. ಆದರೆ, 16ನೇ ಓವರ್ನಲ್ಲಿ ಅವರೂ ಔಟಾಗಿ ಪೆವಿಲಿಯನ್ ಸೇರಿದರು. ಈ ಹಿಂದೆಯೂ ಕೂಡ ಚೆನ್ನೈ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧವೂ ಚೇಸಿಂಗ್ ನಲ್ಲಿ ವಿಫಲವಾಗಿತ್ತು. ಇದು ಚೆನ್ನೈ ತಂಡ ಬ್ಯಾಟಿಂಗ್ ವಿಭಾಗದ ಸಾಮರ್ಥ್ಯವನ್ನು ಜಗಜ್ಜಾಹಿರು ಮಾಡಿದೆ.
Advertisement