ನಾಲ್ಕನೇ ಟೆಸ್ಟ್: ಕರ್ನಾಟಕದ ಮಾಯಾಂಕ್ ಗೆ ಅವಕಾಶ ಸಾಧ್ಯತೆ
ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಗೆದ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ನಾಲ್ಕನೇ ಟೆಸ್ಟ್ ಪಂದ್ಯದ ಜಯದ ಮೇಲೆ ಕಣ್ಣು ನೆಟ್ಟಿದೆ.
Published: 02nd March 2021 08:07 PM | Last Updated: 02nd March 2021 08:07 PM | A+A A-

ಮಾಯಾಂಕ್ ಅಗರವಾಲ್
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ ನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಗೆದ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ನಾಲ್ಕನೇ ಟೆಸ್ಟ್ ಪಂದ್ಯದ ಜಯದ ಮೇಲೆ ಕಣ್ಣು ನೆಟ್ಟಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ವಿರಾಟ್ ಕೊಹ್ಲಿ ಬಳಗಕ್ಕೆ ಈ ಪಂದ್ಯ ಮಹತ್ವದಾಗಿದೆ.
ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ನಲ್ಲಿ ವಿರಾಟ್ ಪಡೆ ಜಯ ಹಾಗೂ ಡ್ರಾ ಸಾಧಿಸಿದರೂ, ಲಂಡನ್ ನಲ್ಲಿ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಅರ್ಹತೆ ಪಡೆಯುತ್ತದೆ. ಹೀಗಾಗಿ ತಂಡದ ರಚನೆಯ ಮೇಲೆ ಆತಿಥೇಯ ತಂಡ ಚಿತ್ತ ನೆಟ್ಟಿದೆ. ಅಲ್ಲದೆ ಪಿಚ್ ಮರ್ಮಕ್ಕೆ ಅನುಗುಣವಾಗಿ ಆಟಗಾರರನ್ನು ಮೈದಾನಕ್ಕೆ ಇಳಿಸುವ ಇರಾದೆ ಹಾಕಿಕೊಂಡಿದೆ.
ಅತಿ ದೊಡ್ಡ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ವಾತಾವರಣದ ಲಾಭ ಪಡೆದು ಪಿಚ್ ನಿರ್ಮಿಸುವ ಇರಾದೆ ಇದೆ. ಹೀಗಾಗಿ ನಾಲ್ಕನೇ ಟೆಸ್ಟ್ ಸಹ ಸ್ಪಿನ್ ಬೌಲರ್ ಗಳಿಗೆ ಸಹಾಯವಾಗುವ ನಿರೀಕ್ಷೆ ಇದೆ.
ಮೂರನೇ ಟೆಸ್ಟ್ ಪಂದ್ಯದ ಬಳಿಕ ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರ ನಡೆದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಸ್ಥಾನದಲ್ಲಿ ಉಮೇಶ್ ಯಾದವ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಈ ಸ್ಥಾನದ ಮೇಲೆ ಮೊಹಮ್ಮದ್ ಸಿರಾಜ್ ಸಹ ಕಣ್ಣು ನೆಟ್ಟಿದ್ದಾರೆ. ಆದರೆ ಅಂಕಿ ಅಂಶಗಳು ಉಮೇಶ್ ಯಾದವ್ ಅವರತ್ತ ಬೊಟ್ಟು ಮಾಡಿ ತೋರಿಸುತ್ತವೆ. ಇವರು 2018ರಿಂದ ತವರಿನಲ್ಲಿ 7 ಪಂದ್ಯಗಳನ್ನು ಆಡಿದ್ದು, 38 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಸಿಕ್ಕ ಅವಕಾಶವನ್ನು ಬಳಸಿಕೊಂಡು ತನ್ನ ಪ್ರತಿಭೆಯ ದರ್ಶನವನ್ನು ಮಾಡಿಸಿದ್ದ ಬ್ಯಾಟಿಂಗ್ ಆಲ್ ರೌಂಡರ್ ವಾಶಿಂಗ್ಟನ್ ಸುಂದರ್ ಆಡುವ ಹನ್ನೊಂದರ ಬಳಗದಿಂದ ಅವಕಾಶ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಸುಂದರ್ ಅವರು ಕಳೆದ 5 ಇನ್ನಿಂಗ್ಸ್ ಗಳಲ್ಲಿ 76.4 ಓವರ್ ಗಳನ್ನು ಬೌಲ್ ಮಾಡಿದ್ದು 5 ವಿಕೆಟ್ ಕಬಳಿಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ನಲ್ಲಿ ಸುಂದರ್ ತಮ್ಮ ಛಾಪು ಮೂಡಿಸುವಲ್ಲಿ ಎಡವಿದ್ದರು. ಅಲ್ಲದೆ ಮೊಟೇರಾದಲ್ಲಿ ನಡೆದ ಟೆಸ್ಟ್ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ನಾಲ್ಕು ಎಸೆತ ಮಾತ್ರ ಎಸೆದಿದ್ದರು. ಇವರ ಸ್ಥಾನದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲು ಕುಲದೀಪ್ ಯಾದವ್ ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನು ಪ್ರಸಕ್ತ ಸರಣಿಯ ಮೊದಲ ಪಂದ್ಯವನ್ನು ಹೊರತು ಪಡಿಸಿ ಉಳಿದ ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿರುವ ಭರವಸೆಯ ಯುವ ಆಟಗಾರ ಶುಭಮನ್ ಗಿಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇವರ ಸ್ಥಾನದಲ್ಲಿ ಕರ್ನಾಟಕದ ಮಾಯಾಂಕ್ ಅಗರ್ ವಾಲ್ ಬ್ಯಾಟ್ ಮಾಡಬಹುದು.