ಬೆಂಗಳೂರು: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ, ಹೊಸ ಜವಾಬ್ದಾರಿ ವಹಿಸಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(ಎನ್ ಸಿಎ) ನೂತನ ಮುಖ್ಯಸ್ಥರನ್ನಾಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದೆ ಎನ್ ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಈಗ ಭಾರತ ತಂಡದ ಕೋಚ್ ಆಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಈ ನೂತನ ಹೊಣೆಗಾರಿಕೆ ಲಕ್ಷ್ಮಣ್ ಅವರಿಗೆ ಒಲಿದು ಬಂದಿದೆ. ಈ ಹಿಂದೆ ಈ ಹುದ್ದೆಯನ್ನು ಅಲಂಕರಿಸಲು ಮಾಜಿ ಬ್ಯಾಟ್ಸಮನ್ ಲಕ್ಷ್ಮಣ್ ನಿರಾಕರಿಸಿದ್ದರು.
ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಮನವೊಲಿಸಿದ ನಂತರ ಮಾಜಿ ಆಟಗಾರ ಲಕ್ಷ್ಮಣ್ ಒಪ್ಪಿಕೊಂಡರು ಎಂದು ತಿಳಿದುಬಂದಿದೆ. ಭಾರತ ಎ ತಂಡ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಲಕ್ಷ್ಮಣ್ ಎನ್ ಸಿಎ ಮುಖ್ಯಸ್ಥರ ಸ್ಥಾನವನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ.
ಸನ್ ರೈಸರ್ಸ್ ಹೈದ್ರಾಬಾದ್ ನ ಮೆಂಟರ್ಸ್ ಆಗಿರುವ ವಿವಿಎಸ್ ಲಕ್ಷ್ಮಣ್ ಅವರು, ಪ್ರಾಂಚೈಸಿ ಅವರೊಂದಿಗೆ ಮಾತನಾಡಿದ್ದಾರೆ. ಇದರೊಂದಿಗೆ ಎಲ್ಲ ರೀತಿಯ ಸಮಸ್ಯೆಗಳು ಬಗೆಹರಿದಿವೆ ಎಂದು ತಿಳಿದುಬಂದಿದೆ. ಲಕ್ಷ್ಮಣ್ ಟೀಂ ಇಂಡಿಯಾ ಪರ 134 ಟೆಸ್ಟ್ ಹಾಗೂ 86 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ರವಿಶಾಸ್ತ್ರಿ ಅವರ ಬಳಿಕ ಟೀಮ್ ಇಂಡಿಯಾದ ಕೋಚ್ ಆಗಲು ಲಕ್ಷ್ಮಣ್ ಬಯಸಿದ್ದರು. ಆದರೆ, ರಾಹುಲ್ ದ್ರಾವಿಡ್ ತಂಡದ ಮುಖ್ಯ ಕೋಚ್ ಆಗಿರುವುದರಿಂದ ಸೌರವ್ ಗಂಗೂಲಿ ಅವರ ಮಾತುಕತೆಯ ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಲು ಲಕ್ಷ್ಮಣ್ ಅವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement