ನವದೆಹಲಿ: ಟೀಂ ಇಂಡಿಯಾ ಮುಖ್ಯ ತರಬೇತುದಾರ ಹುದ್ದೆಗೆ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರನ್ನು ಮನವೊಲಿಸಿದ ಕೆಲ ದಿನಗಳ ಬಳಿಕ ಬಿಸಿಸಿಐ ಭಾನುವಾರ ಮುಖ್ಯ ಕೋಚ್ ಹಾಗೂ ಮೂವರು ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನಿವೃತ್ತ ನ್ಯಾಯಮೂರ್ತಿ ಎಂ.ಆರ್. ಲೋಧಾ ಅವರ ಶಿಫಾರಸ್ಸುಗಳ ಮೇರೆಗೆ ರೂಪಿಸಲಾದ ನಿಯಮಗಳ ಅನ್ವಯ ಬಿಸಿಸಿಐ ಈ ಅರ್ಜಿಗಳನ್ನು ಆಹ್ವಾನಿಸಿದೆ.
ಏನಾದರೂ ಅಚ್ಚರಿ ನಡೆಯದಿದ್ದರೆ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಟೀಂ ಇಂಡಿಯಾ ಎ ಮತ್ತು 19 ವರ್ಷದೊಳಗಿನವರ ತಂಡಕ್ಕೆ ಮಾರ್ಗದರ್ಶಕರಾಗಿರುವ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಮುಖ್ಯ ತರಬೇತುದಾರರಾಗುವುದು ಬಹುತೇಕ ಖಚಿತವಾಗಿದೆ.
ದುಬೈನಲ್ಲಿ ಇತ್ತೀಚಿಗೆ ಐಪಿಎಲ್ ಫೈನಲ್ ಸಂದರ್ಭದಲ್ಲಿ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ರಾಹುಲ್ ದ್ರಾವಿಡ್, ಮುಖ್ಯ ತರಬೇತುದಾರರಾಗಲು ಔಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಮೂಲಕ ಅಪೆಕ್ಸ್ ಸಮಿತಿಗೆ ಈ ಕುರಿತು ಔಪಚಾರಿಕ ಶಿಫಾರಸು ಮಾಡಬೇಕಾಗಿದೆ. ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನವಾಗಿದೆ.
Advertisement