ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವೇಗಿ ಮೊಹಮ್ಮದ್ ಸಿರಾಜ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ಕೀಪರ್-ಬ್ಯಾಟರ್ ಫಿಲ್ ಸಾಲ್ಟ್ ಜೊತೆ ವಾಗ್ವಾದಕ್ಕಿಳಿದರು. ಶನಿವಾರ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಇಬ್ಬರೂ ಬಿಸಿಯಾದ ವಾಗ್ಯುದ್ಧದಲ್ಲಿ ಪಾಲ್ಗೊಂಡರು.
ದೆಹಲಿಯ ರನ್ ಚೇಸ್ನಲ್ಲಿ ಪವರ್-ಪ್ಲೇನ ಅಂತಿಮ ಓವರ್ನಲ್ಲಿ ಈ ಘಟನೆ ಸಂಭವಿಸಿದೆ. ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸಾಲ್ಟ್, ಸಿರಾಜ್ ಎಸೆತದಲ್ಲಿ 6,6 ಮತ್ತು 4 ರನ್ಗಳನ್ನು ಗಳಿಸಿದ್ದರು. ಇದುವೇ ಸಿರಾಜ್ ಅವರ ನಿದ್ದೆಗೆಡಿಸಿತು.
ಬಳಿಕ, ಸಿರಾಜ್ ಶಾರ್ಟ್ ಪಿಚ್ ಎಸೆದ ಚೆಂಡನ್ನು ಸಾಲ್ಟ್ ಹೊಡೆಯಲು ಪ್ರಯತ್ನ ಪಟ್ಟರು. ಆದರೆ, ಅಂಪೈರ್ ಅದನ್ನು ವೈಡ್ ಎಂದು ನಿರ್ಧಾರ ಮಾಡಿದರು.
ಈ ವೇಳೆ, 29 ವರ್ಷದ ಸಿರಾಜ್ಗೆ ಅಂಪೈರ್ನ ನಿರ್ಧಾರದಿಂದ ಯಾವುದೇ ಸಂತೋಷವಾಗಲಿಲ್ಲ, ಅವರು ಸಾಲ್ಟ್ನ ಬಳಿಗೆ ಬಂದು ವಾಗ್ವಾದದಲ್ಲಿ ನಿರತರಾದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ, ಸಿರಾಜ್ ತಮ್ಮ ಮೊದಲ ಐಪಿಎಲ್ ನಾಯಕನ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಮತ್ತು ಅವರ ಬಳಿಯಲ್ಲಿಯೂ ವಾಗ್ವಾದಕ್ಕಿಳಿದರು. ಈ ವೇಳೆ ವೇಗಿ ಸಿರಾಜ್ ಕೆಲವು ಸನ್ನೆಗಳನ್ನು ಮಾಡುತ್ತಾ, ಸಾಲ್ಟ್ ಅವರಿಗೆ ಸುಮ್ಮನಿರುವಂತೆ ಹೇಳುತ್ತಿದ್ದರು.
ಅಂತಿಮವಾಗಿ, ಮೈದಾನದಲ್ಲಿದ್ದ ಅಂಪೈರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪಂದ್ಯದ ನಂತರ ಸಿರಾಜ್ಗೆ ದಂಡ ವಿಧಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ.
ಇನ್ನು ಪಂದ್ಯದ ನಂತರ ಪ್ರತಿಕ್ರಿಯಿಸಿದ ಫಿನ್ ಸಾಲ್ಟ್, 'ಸಿರಾಜ್ ನಿರಂತರವಾಗಿ ನನ್ನ ಮೇಲೆ ಹಿಡಿಶಾಪ ಹಾಕುತ್ತಿದ್ದರು. ಆಗ ನಾನು, ನಿಮ್ಮ ತಂಡವು ಹೆಚ್ಚು ರನ್ ಗಳಿಸಬೇಕು ಗೆಳೆಯ ಎಂದು ನಾನು ಹೇಳಿದೆ' ಎಂದಿದ್ದಾರೆ.
ಆಟದ ಬಗ್ಗೆ ಹೇಳುವುದಾದರೆ, ಸಾಲ್ಟ್ ಅಸಾಧಾರಣ ಅರ್ಧಶತಕವನ್ನು (45 ಎಸೆತಗಳಲ್ಲಿ 87) ಹೊಡೆದು ವಿರಾಟ್ ಕೊಹ್ಲಿ ಮತ್ತು ಮಹಿಪಾಲ್ ಲೊಮ್ರೋರ್ ಅವರ ಅರ್ಧಶತಕಗಳನ್ನು ಮೀರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಳು ವಿಕೆಟ್ಗಳ ಗೆಲುವಿಗೆ ಕಾರಣರಾದರು.
Advertisement