ಮುಖ್ಯ ಕೋಚ್ ಗೌತಮ್ ಗಂಭೀರ್- ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ಬಿರುಕು; ದಿನೇಶ್ ಕಾರ್ತಿಕ್ ಹೇಳಿದ್ದೇನು?

'ಸ್ಕೈ ಸ್ಪೋರ್ಟ್ಸ್'ನಲ್ಲಿ ಮಾತನಾಡಿದ ಕಾರ್ತಿಕ್, ಭಾರತೀಯ ತಂಡದ ಆಡಳಿತ ಮಂಡಳಿಯ ಈ ನಿಲುವು ದೂರದೃಷ್ಟಿಯಿಲ್ಲದ್ದು ಹಾಗೂ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕೆಂದು ಹೇಳಿದರು.
Gautam Gambhir - Ajit Agarkar
ಗೌತಮ್ ಗಂಭೀರ್-ಅಜಿತ್ ಅಗರ್ಕರ್online desk
Updated on

ಟಿ20 ಕ್ರಿಕೆಟ್ ತಂಡದ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದಂತೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯವಿರುವಂತೆ ತೋರುತ್ತಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಐರ್ಲೆಂಡ್ ವಿರುದ್ಧದ ಐತಿಹಾಸಿಕ ಸರಣಿ ಸೋಲಿನ ಬೆನ್ನಲ್ಲೇ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ 0-4 ಅಂತರದ ಹೀನಾಯ ಸೋಲನ್ನು ಅನುಭವಿಸಿದೆ. ಕೋಚ್ ಮತ್ತು ಮುಖ್ಯ ಆಯ್ಕೆಗಾರರ ​​ನಡುವಿನ ಇಂತಹ ಭಿನ್ನಾಭಿಪ್ರಾಯವು ಆಟಗಾರರಿಗೆ ಒಳ್ಳೆಯದಲ್ಲ ಮತ್ತು ಇದನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕಿದೆ ಎಂದು ದಿನೇಶ್ ಕಾರ್ತಿಕ್ ಪ್ರತಿಪಾದಿಸಿದ್ದಾರೆ.

2026ರ ಟಿ20 ವಿಶ್ವಕಪ್‌ನಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದ ಸಂಜು ಸ್ಯಾಮ್ಸನ್ ಅವರಿಗೆ ತಂಡದ ಆಡಳಿತ ಮಂಡಳಿಯ ಬೆಂಬಲವಿದ್ದರೂ, ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ತಂಡದಿಂದ ಕೈಬಿಡಲಾಯಿತು. ನಂತರದ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಲಾಯಿತಾದರೂ, ಮೂರು ಪಂದ್ಯಗಳ ನಂತರ 15 ವರ್ಷದ ಆಟಗಾರನನ್ನೂ ಕೈಬಿಟ್ಟು, ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಸಂಜು ಅವರನ್ನು ಮತ್ತೆ ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲಾಯಿತು.

'ಸ್ಕೈ ಸ್ಪೋರ್ಟ್ಸ್'ನಲ್ಲಿ ಮಾತನಾಡಿದ ಕಾರ್ತಿಕ್, ಭಾರತೀಯ ತಂಡದ ಆಡಳಿತ ಮಂಡಳಿಯ ಈ ನಿಲುವು ದೂರದೃಷ್ಟಿಯಿಲ್ಲದ್ದು ಹಾಗೂ ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಳ್ಳಬೇಕೆಂದು ಹೇಳಿದರು.

'ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಭವಿಷ್ಯದತ್ತ ಗಮನಹರಿಸುತ್ತಿದ್ದಾರೆ ಮತ್ತು ಲಭ್ಯವಿರುವ ಆಟಗಾರರ ಗುಂಪನ್ನು ಪರೀಕ್ಷಿಸಿ ನೋಡಲು ಬಯಸುತ್ತಿದ್ದಾರೆ. ಆದರೆ, ಸದ್ಯ ಪ್ರಮುಖ ಜವಾಬ್ದಾರಿಯನ್ನು ಹೊತ್ತಿರುವ ಗಂಭೀರ್, ತಾವು ಆಡುವ ಪ್ರತಿಯೊಂದು ದ್ವಿಪಕ್ಷೀಯ ಸರಣಿಯನ್ನೂ ಗೆಲ್ಲಬೇಕೆಂದು ಯೋಚಿಸುತ್ತಿರಬಹುದು. ಹೀಗಾಗಿ, ದೀರ್ಘಕಾಲೀನ ಯೋಜನೆಗಳನ್ನು ಹೊಂದಿರುವ ಮುಖ್ಯ ಆಯ್ಕೆಗಾರ ಹಾಗೂ 'ಆಡುವ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕು' ಎಂದು ಬಯಸುವ ಸದ್ಯದ ಕೋಚ್ ನಡುವೆ ಸ್ವಲ್ಪ ಭಿನ್ನಾಭಿಪ್ರಾಯವಿರುವುದನ್ನು ನಾನು ಕಾಣುತ್ತಿದ್ದೇನೆ; ಇದೇ ಕಾರಣಕ್ಕೆ ನಮ್ಮ ಕಣ್ಣ ಮುಂದೆಯೇ ಒಂದು ರೀತಿಯ ಗೊಂದಲ ಸೃಷ್ಟಿಯಾಗಿದೆ. ಇದು ಆಟಗಾರರಿಗೆ ಸೂಕ್ತವೇ? ಖಂಡಿತವಾಗಿಯೂ ಅಲ್ಲ. ಭಾರತವು ಈ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಿಕೊಂಡು, ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ' ಎಂದು ಕಾರ್ತಿಕ್ ಹೇಳಿದರು.

ಟಿ20 ವಿಶ್ವಕಪ್‌ನಲ್ಲಿ 321 ರನ್ ಮತ್ತು ಐಪಿಎಲ್ 2026ರಲ್ಲಿ 477 ರನ್ ಗಳಿಸಿದ ನಂತರವೂ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದ ಕಾರಣಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ಭಾರತದ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಯಿತು. ಬದಲಾಗಿ, 15 ವರ್ಷದ ವೈಭವ್ ಸೂರ್ಯವಂಶಿಗೆ ಸತತ ಮೂರು ಅವಕಾಶಗಳನ್ನು ನೀಡಲಾಯಿತು. ತಮ್ಮ ಚೊಚ್ಚಲ ಟಿ20 ಸರಣಿಯಲ್ಲಿ ವೈಭವ್ 14, 13 ಮತ್ತು 15 ರನ್ ಗಳಿಸಿದರಾದರೂ, ಅಂತಿಮ ಟಿ20 ಪಂದ್ಯದಿಂದ ಅವರನ್ನು ಕೈಬಿಡಲಾಯಿತು. ಬ್ಯಾಟಿಂಗ್ ಕ್ರಮಾಂಕದ ಮೇಲ್ಭಾಗದಲ್ಲಿ ಎಡ-ಬಲ ಬ್ಯಾಟರ್‌ಗಳ ಸಂಯೋಜನೆಯನ್ನು ಕಾಯ್ದುಕೊಳ್ಳುವ ಅಗತ್ಯವಿದ್ದಿದ್ದೇ ಇದಕ್ಕೆ ಕಾರಣವೆಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದರು.

ಈ ತಂತ್ರ ಇದೀಗ ಪ್ರಶ್ನಾರ್ಹವಾಗಿದೆ. ಮೂರು ಕಳಪೆ ಪ್ರದರ್ಶನಗಳ ನಂತರವೂ ಸ್ಯಾಮ್ಸನ್‌ ಅವರನ್ನೇ ಮುಂದುವರಿಸಬಹುದಿತ್ತು. ಏಕೆಂದರೆ, ಅವರು ಎಡ-ಬಲ ಸಂಯೋಜನೆಯನ್ನು ಕಾಯ್ದುಕೊಳ್ಳುವುದಲ್ಲದೆ, ಹಿಂದೆ ತಂಡಕ್ಕಾಗಿ ಪ್ರದರ್ಶನ ನೀಡಿದ ಆಟಗಾರನನ್ನು ಬೆಂಬಲಿಸುವ ನಿಲುವನ್ನು ತೆಗೆದುಕೊಳ್ಳಬೇಕಿತ್ತು ಎಂಬ ಮಾತುಗಳು ಕೇಳಿಬಂದಿವೆ.

Gautam Gambhir - Ajit Agarkar
T20I ಸರಣಿಯ ಹೀನಾಯ ಸೋಲು ಏಕದಿನ ಪ್ರದರ್ಶನದ ಮೇಲೆ ಪರಿಣಾಮ ಬೀರಲ್ಲ; ಕಾರಣ ತಿಳಿಸಿದ ಶುಭಮನ್ ಗಿಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com