ನವದೆಹಲಿ: ಲೋಕಸಭೆ ಸ್ಪೀಕರ್ ಹಾಗೂ ಮಧ್ಯಪ್ರದೇಶ ಇಂದೋರ್ ನಿಂದ ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುಮಿತ್ರಾ ಮಹಾಜನ್ ಈ ಬಾರಿ ಸಂಸದೀಯ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಚುನಾವಣೆ ಸ್ಪರ್ಧೆಯ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಪಕ್ಷಕ್ಕೆ ಸ್ವಾತಂತ್ರವಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ವಾರ 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಮಿತ್ರಾ ಮಹಾಜನ್ ವಯಸ್ಸಿನ ಕಾರಣದಿಂದ ಚುನಾವಣಾ ಕಣದಿಂದ ಹೊರಗುಲಿಯಲಿದ್ದಾರೆ ಎನ್ನಲಾಗಿದೆ. 75 ವರ್ಷ ದಾಟಿದವರಿಗೆ ಚುನಾವಣೆ ಟಿಕೆಟ್ ನೀಡದಿರಲು ಬಿಜೆಪಿ ತೀರ್ಮಾನಿಸಿರುವುದು ಇದಕ್ಕೆ ಪೂರಕವಾಗಿದೆ.
"ನನ್ನ ಸ್ಪರ್ಧೆ ಕುರಿತು ಊಹಾಪೋಹಗಳಿದ್ದು ಅದನ್ನು ಕೊನೆಗೊಳಿಸಲು ನಾನೇ ಈ ಹೇಳಿಕೆ ನೀಡಿದ್ದೇನೆ. ನಾನು ಈ ಸಾಲಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ" ಇಂದೋರ್ ನಲ್ಲಿ ಮಹಾಜನ್ ಪಿಟಿಐ ಜತೆ ಮಾತನಾಡಿ ತಿಳಿಸಿದ್ದಾರೆ.