ಲೋಕಸಭೆ ಚುನಾವಣೆ: ಮೊದಲ ಹಂತ ಬಹುತೇಕ ಶಾಂತಿಯುತ ಅಂತ್ಯ, ತ್ರಿಪುರದಲ್ಲಿ ಅತಿ ಹೆಚ್ಚು ಮತದಾನ

ಆಂಧ್ರ ಪ್ರದೇಶ ಹೊರತುಪಡಿಸಿ 2019ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬಹುತೇಕ ಶಾಂತಿಯುತವಾಗಿ...
ಮತದಾರರು
ಮತದಾರರು
ನವದೆಹಲಿ: ಆಂಧ್ರ ಪ್ರದೇಶ ಹೊರತುಪಡಿಸಿ 2019ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದ್ದು, ತ್ರಿಪುರದಲ್ಲಿ ಅತಿ ಹೆಚ್ಚು ಶೇ.81ರಷ್ಟು ಮತದಾನವಾಗಿದೆ.
ಇಂದು 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ನಕ್ಸಲರ ಭಯದಿಂದಾಗಿ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಮತದಾನವಾಗಿದೆ.
ಆಂಧ್ರ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಇಬ್ಬರು ಬಲಿಯಾಗಿದ್ದು, ಕೆಲವು ಕಡೆ ಸಣ್ಣಪುಟ್ಟ ಘರ್ಷಣೆ, ಮತದಾನ ಯಂತ್ರದಲ್ಲಿನ ತಾಂತ್ರಿಕ ತೊಂದರೆ, ಬೂತ್ ವಶೀಕರಣ ವಿಫಲ ಯತ್ನದಂತಹ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಆಂಧ್ರಪ್ರದೇಶದ ಅನಂತಪುರದ ತಾಡಪತ್ರಿ ಪಟ್ಟಣದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಡಿಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಟಿಡಿಪಿಯ ಒಬ್ಬ ಹಾಗೂ ವೈಎಸ್ ಆರ್ ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದು, ಇಂದಿನ ಮುಖ್ಯ ವಿದ್ಯಮಾನ ಎನಿಸಿಕೊಂಡಿತು. ಇದಕ್ಕೆ ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ.
ಇನ್ನು ಸಂಜೆ 5 ಗಂಟೆಯವರೆಗೆ ಉತ್ತರ ಪ್ರದೇಶದಲ್ಲಿ ಶೇ.59, ಬಿಹಾರದಲ್ಲಿ ಶೇ.50, ಮೇಘಾಲಯದಲ್ಲಿ ಶೇ.62, ಅಂಡಾಮಾನ್ ಮತ್ತು ನಿಕೋಬಾರ್ ನಲ್ಲಿ ಶೇ.70, ಆಂಧ್ರ ಪ್ರದೇಶದಲ್ಲಿ ಶೇ.66, ಛತ್ತೀಸ್ ಗಢದಲ್ಲಿ ಶೇ.56, ತೆಲಂಗಾಣದಲ್ಲಿ ಶೇ.57, ಜಮ್ಮು ಮತ್ತು ಕಾಶ್ಮೀರದಲ್ಲಿ 54, ಮಿಜೋರಾಂನಲ್ಲಿ ಶೇ.60, ನಾಗಾಲ್ಯಾಂಡ್ ನಲ್ಲಿ ಶೇ.73, ಮಣಿಪುರದಲ್ಲಿ ಶೇ.78, ಸಿಕ್ಕಿಂನಲ್ಲಿ ಶೇ.75 ಅಸ್ಸಾಂನಲ್ಲಿ ಶೇ.67 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.58ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com