ಲಖನೌ: ಮನೇಕಾ ಗಾಂಧಿ ಅವರು ಶುಕ್ರವಾರ ಭಾರೀ ವಿವಾದಾತ್ಮಕ ಹೇಳಿಕೆ ನೀಡಿದ್ದು, ನಿಮಗೆ ಕೆಲಸ ಬೇಕಿದ್ದರೆ ನನಗೆ ಮತ ನೀಡಿ ಎಂದು ಮುಸ್ಲಿಮ್ ಮತದಾರರಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ತಮಗೆ ಜನರ ಅಗತ್ಯಕ್ಕಿಂತ, ಜನರಿಗೆ ತನ್ನ ಅಗತ್ಯ ಇದೆ ಎಂದೂ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಇಂದು ಉತ್ತರ ಪ್ರದೇಶದ ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದ ಮುಸ್ಲಿಮರು ಪ್ರಾಬಲ್ಯವಿರುವ ತುರಬ್ ಖಾನಿ ಎಂಬ ಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ, ನೀವು ನನಗೆ ನೋಟು ಹಾಕದಿದ್ದರೆ ನಿಮಗೆ ನಾನು ಕೆಲಸ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದೀಗ ಕೇಂದ್ರ ಸಚಿವೆಯ ವಿವಾದಾತ್ಮಕ ಹೇಳಿಕೆಯ ವಿಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳು ಮನೇಕಾ ಗಾಂಧಿ ಅವರ ಈ ಹೇಳಿಕೆಯನ್ನು ದೊಡ್ಡ ಹಗರಣ ಎಂದು ಬಣ್ಣಿಸಿವೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಮನೇಕಾ ಗಾಂಧಿ ಅವರು ಈ ವಿಡಿಯೋದಲ್ಲಿ, ಮುಸ್ಲಿಮರು ಕೊಟ್ಟು ತೆಗೆದುಕೊಳ್ಳುವ ವ್ಯವಹಾರವನ್ನು ಅರಿತುಕೊಳ್ಳಬೇಕಿದೆ. ವೋಟು ಹಾಕದೇ ಕೆಲಸ ಕೇಳಿಕೊಂಡು ಬಂದರೆ ಹೇಗೆ ಕೊಡಿಸಲು ಸಾಧ್ಯ ಎಂದು ಮುಸ್ಲಿಮರನ್ನು ಪ್ರಶ್ನಿಸಿದ್ದಾರೆ.
“ಮುಸ್ಲಿಮರ ಬೆಂಬಲವಿಲ್ಲದೇ ನನಗೆ ಗೆಲ್ಲೋದು ಇಷ್ವವಿಲ್ಲ. ಮುಸ್ಲಿಮರು ವೋಟು ಹಾಕಿದಿದ್ದರೆ ನೋವಾಗುತ್ತದೆ. ಮುಸ್ಲಿಮರು ಕೆಲಸ ಕೇಳಿಕೊಂಡು ಬಂದರೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಒಂದು ಉದ್ಯೋಗ ಎಂದರೆ ಒಂದು ವ್ಯವಹಾರವಷ್ಟೇ ಎಂದು ಭಾವಿಸಬೇಕಾಗುತ್ತದೆ” ಎಂದು ಮನೇಕಾ ಗಾಂಧಿ ಯಾವುದೇ ಮುಲಾಜಿಲ್ಲದೆ ಹೇಳಿದ್ದಾರೆ.
ಮನೇಕಾ ಗಾಂಧಿ ಅವರು ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಿಲಿಭಿಟ್ನಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. ಸುಲ್ತಾನ್ಪುರ್ನಲ್ಲಿ ಮನೇಕಾ ಅವರ ಮಗ ವರುಣ್ ಗಾಂಧಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಅಮ್ಮ ಮತ್ತು ಮಗ ಕ್ಷೇತ್ರ ಅದಲುಬದಲು ಮಾಡಿಕೊಂಡಿದ್ದಾರೆ.