ಮುಂಬೈ: ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ತಂದೆ ಶತ್ರುಘ್ನ ಸಿನ್ಹಾ ಅವರ ರಾಜಕೀಯ ನಡೆಯನ್ನು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ. ಬಹಳ ಹಿಂದೆಯೇ ಈ ಕೆಲಸ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಶತ್ರುಘ್ನ ಸಿನ್ಹಾರಿಗೆ ಎಲ್ಲಾ ಅರ್ಹತೆ ಇದ್ದರೂ ಬಿಜೆಪಿಯಲ್ಲಿ ಗೌರವ ಸಿಕ್ಕಿರಲಿಲ್ಲ. ಅವರು ಬಹಳ ಹಿಂದೆಯೇ ಬಿಜೆಪಿ ಬಿಡಬೇಕಾಗಿತ್ತು ಎಂದು ನನ್ನಗೆ ಅನಿಸಿತ್ತು ಎಂದು ಕಾರ್ಯಕ್ರಮವೊಂದರಲ್ಲಿ ಸೋನಾಕ್ಷಿ ಸಿನ್ಹಾ ಹೇಳಿದರು.
ಎಲ್ಲಿ ನಮಗೆ ಗೌರವ ದೊರೆಯದಿರುವುದೋ ಅಲ್ಲಿ ಕೆಲಸ ಮಾಡಬಾರದು. ಆ ಕೆಲಸವನ್ನು ತಮ್ಮ ತಂದೆ ಮಾಡಿದ್ದಾರೆ. ಇದು ಅವರ ಆಯ್ಕೆಯಾಗಿದೆ. ಕಾಂಗ್ರೆಸ್ ಸೇರುವ ಮೂಲಕ ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಸೋನಾಕ್ಷಿ ಸಿನ್ಹಾ ನುಡಿದರು.
ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಶತ್ರುಘ್ನ ಸಿನ್ಹಾ ಜೊತೆಗೆ ಮಾತುಕತೆ ನಡೆಸಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು.
ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದು, ನವರಾತ್ರಿಗೆ ಒಳ್ಳೇಯ ಸುದ್ದಿ ನೀಡುತ್ತೇವೆ. ಈಗ ಕಾಂಗ್ರೆಸ್ ಸೇರುತ್ತಿರುವುದಾಗಿ ಶತ್ರುಘ್ನ ಸಿನ್ಹಾ ಹೇಳಿದ್ದರು.
ಏಪ್ರಿಲ್ 6 ರಂದು ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹಾ ಗೊಹಿಲ್ ಟ್ವೀಟ್ ಮಾಡಿದ್ದಾರೆ.
Advertisement