ಮಾಜಿ ಯೋಧ, ವಾರಣಾಸಿಯಲ್ಲಿ ಬಿಎಸ್ ಪಿ ಅಭ್ಯರ್ಥಿ ತೇಜ್ ಬಹದ್ದೂರ್ ಯಾದವ್ ಗೆ ಆಯೋಗ ನೋಟಿಸ್
ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೋ ಮಾಡಿ ಕೆಲಸ ಕಳೆದುಕೊಂಡಿದ್ದ ಮಾಜಿ ಯೋಧ ಹಾಗೂ ಆ ಬಳಿಕ ಪ್ರಧಾನಿ ಮೋದಿ ವಿರುದ್ಧ ಕಣಕ್ಕೆ ನಿಂತು ಸುದ್ದಿಗೆ ಗ್ರಾಸವಾಗಿದ್ದ ತೇಜ್ ಬಹದ್ದೂರ್ ಯಾದವ್ ಅವರಿಗೆ ಚುನಾವಣೆ ಆಯೋಗ ನೋಟಿಸ್ ಜಾರಿ ಮಾಡಿದೆ.
ವಾರಾಣಸಿ: ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೋ ಮಾಡಿ ಕೆಲಸ ಕಳೆದುಕೊಂಡಿದ್ದ ಮಾಜಿ ಯೋಧ ಹಾಗೂ ಆ ಬಳಿಕ ಪ್ರಧಾನಿ ಮೋದಿ ವಿರುದ್ಧ ಕಣಕ್ಕೆ ನಿಂತು ಸುದ್ದಿಗೆ ಗ್ರಾಸವಾಗಿದ್ದ ತೇಜ್ ಬಹದ್ದೂರ್ ಯಾದವ್ ಅವರಿಗೆ ಚುನಾವಣೆ ಆಯೋಗ ನೋಟಿಸ್ ಜಾರಿ ಮಾಡಿದೆ.
ಮೂಲಗಳ ಪ್ರಕಾರ ಭಾರತೀಯ ಯೋಧರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂದು ಆರೋಪಿಸಿ ಫೇಸ್ಬುಕ್ನಲ್ಲಿ ವಿಡಿಯೋ ಶೇರ್ ಮಾಡಿ ಅಶಿಸ್ತಿನ ಕಾರಣದಿಂದಾಗಿ ಸೇನೆಯಿಂದ ಅಮಾನತಾಗಿದ್ದರು. ಆ ಬಳಿಕ ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದ ತೇಜ್ ಪ್ರತಾಪ್ ಗೆ ಬಿಎಸ್ ಪಿ ಟಿಕೆಟ್ ನೀಡಿತ್ತು. ಅದರಂತೆ ಬಿಎಸ್ ಪಿ ಪಕ್ಷದಿಂದ ಸ್ಪರ್ದಿಸಿರುವ ತೇಜ್ ಪ್ರತಾಪ್ ಗೆ ಇದೀಗ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಆಯೋಗದ ನೋಟಿಸ್ ನಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಉದ್ಯೋಗಿಗಳು ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹದಿಂದ ಕೆಲಸದಿಂದ ವಜಾಗೊಂಡರೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ಪ್ರಚಾರದಿಂದ ಅನರ್ಹರಾಗುತ್ತಾರೆ. ಇದೇ ಕಾರಣಕ್ಕೇ ತೇಜ್ ಬಹದ್ದೂರ್ ಯಾದವ್ ಅವರು ಆಯೋಗ ನೋಟಿಸ್ ಜಾರಿ ಮಾಡಿದ್ದು, ಮೇ 1ರೊಳಗೆ ಉತ್ತರಿಸುವಂತೆ ಹೇಳಿದೆ.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತೇಜ್ ಬಹದ್ದೂರ್ ಈ ಹಿಂದೆ ತಮ್ಮನ್ನು ಸೇನೆಯಿಂದ ವಜಾಮಾಡಿದ್ದನ್ನು ಒಪ್ಪಿಕೊಂಡಿದ್ದರು. ಬಳಿಕ ಎಸ್ಪಿ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರದಲ್ಲಿ ಇದನ್ನು ನಿರಾಕರಿಸಿದ್ದರು. ಇದರಿಂದಾಗಿ ನಾಮಪತ್ರದಲ್ಲಿನ ಮಾಹಿತಿಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ತಮ್ಮ ನಾಮಪತ್ರದಲ್ಲಿರುವಂತೆ ವಜಾಮಾಡಿದ್ದನ್ನು ಒಪ್ಪಿಕೊಳ್ಳುವಿರಾ ಅಥವಾ ನಿರಾಕರಿಸುವಿರಾ ಸ್ಪಷ್ಟಪಡಿಸಿ ಎಂದು ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೇಜ್ ಪ್ರತಾಪ್, ನಾನು ಆಯೋಗಕ್ಕೆ ಸಲ್ಲಿಸ ಬೇಕಾಗಿರುವ ಎಲ್ಲ ದಾಖಲೆಗಳನ್ನೂ ಮತ್ತು ಪ್ರಮಾಣ ಪತ್ರಗಳನ್ನು ಈಗಾಗಲೇ ಸಲ್ಲಿಸಿದ್ದೇನೆ, ಆದರೂ ಆಯೋಗ ನೋಟಿಸ್ ನೀಡಿದ್ದು, ಇದು ನನ್ನ ಸ್ಪರ್ಧೆಯನ್ನು ತಡೆಯಲು ಹೆಣೆದಿರುವ ಷಡ್ಯಂತ್ರವಾಗಿದೆ ಎಂದು ತೇಜ್ ಪ್ರತಾಪ್ ಆರೋಪಿಸಿದ್ದಾರೆ.