'ವಿಶ್ವಸಂಸ್ಥೆ ಮೋದಿ ಜೇಬಲಿಲ್ಲ, ದಿಟ್ಟ ನಿರ್ಧಾರಕ್ಕೆ ಪ್ರಬಲ ನಾಯಕತ್ವ ಬೇಕು': 'ಕೈ' ವಿರುದ್ಧ ಶಿವಸೇನೆ ಕಿಡಿ

ಉಗ್ರರ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ.. ದಿಟ್ಟ ನಿರ್ಧಾರಕ್ಕೆ ಪ್ರಬಲ ನಾಯಕತ್ವ ಬೇಕು. ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಶಿವಸೇನೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಾಗತಿಕ ಉಗ್ರಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಂಕೆ ವ್ಯಕ್ತಪಡಿಸಿದ್ದ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿರುವ ಶಿವಸೇನೆ, ಉಗ್ರರ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ.. ವಿಶ್ವಸಂಸ್ಥೆ ಮೋದಿ ಜೇಬಲಿಲ್ಲ. ದಿಟ್ಟ ನಿರ್ಧಾರಕ್ಕೆ ಪ್ರಬಲ ನಾಯಕತ್ವ ಬೇಕು. ಇದು ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಹೇಳಿದೆ.
ಹೌದು.. ಈ ಹಿಂದೆ ಬಿಜೆಪಿ ಮತ್ತು ಮೋದಿ ನಾಯಕತ್ವದ ವಿರುದ್ಧ ಟೀಕೆ ಮಾಡುತ್ತಿದ್ದ ಶಿವಸೇನೆ, ಮೈತ್ರಿ ಬಳಿಕ ಪ್ರಧಾನಿ ಮೋದಿ ಹಾಗೂ ಅವರ ನಾಯಕತ್ವವನ್ನು ಪ್ರಶಂಸಿಸುತ್ತಿದ್ದು, ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಾಗತಿಕ ಉಗ್ರ ಪಟ್ಟಿಗೆ ಮಸೂದ್ ಅಜರ್ ನನ್ನು ಸೇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮೋದಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಶಿವಸೇನೆ, ಉಗ್ರರ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ. ಇದು ಖಂಡಿತಾ ಭಾರತದ ರಾಜಂತಾಂತ್ರಿಕತೆ ಸಿಕ್ಕ ದೊಡ್ಡ ಯಶಸ್ಸು. ಆದರೆ ಈ ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಬಣ್ಣ ಬೆರೆಸಲು ಯತ್ನಿಸುತ್ತಿದೆ. ವಿಶ್ವಸಂಸ್ಥೆ ಏನು ಮೋದಿ ಜೇಬಲಿಲ್ಲ ಎಂದು ಕಿಡಿಕಾರಿದೆ.
'ಮಸೂದ್ ಅಜರ್ ಕುಖ್ಯಾತ ಉಗ್ರ. ಮುಂಬೈ ದಾಳಿ ಮತ್ತು ಪುಲ್ವಾಮ ಉಗ್ರ ದಾಳಿಯ ರೂವಾರಿ..ಆತ ಪಾಕಿಸ್ತಾನದಲ್ಲಿರುವ ಭಯೋತ್ಪಾದನೆ ಕಾರ್ಖಾನೆಯ ನಿರ್ದೇಶಕನಾಗಿದ್ದು, ಭಾರತದಲ್ಲಿ ನಡೆದ ಬಹುತೇಕ ಉಗ್ರ ದಾಳಿಗಳ ಕಾರಣಕರ್ತ. ಭಾರತದ ನಂಬರ್ ಒನ್ ಶತ್ರು ಆತ. ಭಾರತವನ್ನು ತುಂಡು ತುಂಡಾಗಿ ಕತ್ತರಿಸುವ ಕನಸು ಹೊತ್ತಿದ್ದಾನೆ. 40 ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ಹಿಂದಿರುವ ಸೈತಾನ ಆತ. ಆದರೆ ಇಂತಹ ಉಗ್ರನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿದರೆ, ಇದನ್ನೂ ಕಾಂಗ್ರೆಸ್ ನಾಯಕರು ಶಂಕೆಯಿಂದ ನೋಡುತ್ತಿದ್ದಾರೆ. ಚುನಾವಣಾ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಈ ನಿರ್ಧಾರವನ್ನು ಅವರು ಶಂಕಿಸಿದ್ದಾರೆ. ಆದರೆ ಎಲ್ಲರೂ ಒಂದು ತಿಳಿಯಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಯಾವುದೇ ಸಮಯವಿಲ್ಲ. ಇದು ಖಂಡಿತಾ ಭಾರತದ ರಾಜತಾಂತ್ರಿಕತೆಗೆ ಸಿಕ್ಕ ಅತ್ಯಂತ ದೊಡ್ಡ ಗೆಲುವು. 
ಆದರೆ ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಅವರು 'ಚುನಾವಣೆ ಹೊತ್ತಿನಲ್ಲಿ' ಎಂದು ತಗಾದೆ ತೆಗೆದಿದ್ದಾರೆ. ಬಹುಶಃ ಅವರಿಗೆ ವಿಶ್ವಸಂಸ್ಥೆಯ ನಿರ್ಧಾರ ಮೋದಿ ಅವರಿಗೆ ಲಾಭವಾಗುತ್ತದೆ ಎಂದೆನಿಸಿರಬೇಕು. ಈ ಬಗ್ಗೆ ಅವರು ವಿಶ್ವಸಂಸ್ಥೆಯನ್ನೇ ಕೇಳಬೇಕು. ಆದರೆ ಯಾರೂ ಕೂಡ ಉಗ್ರರ ವಿರುದ್ಧದ ಹೋರಾಟದಲ್ಲಿ ಸಮಯವನ್ನು ಪ್ರಶ್ನೆ ಮಾಡಬಾರದು. ಇದು ಒಂದು ದೇಶದ ಪ್ರಜೆಗಳ ಭಾವನೆದೆ ಸಂಬಂಧಿಸಿದ ವಿಚಾರವಾಗಿದೆ. ಈ ಹಿಂದೆ ಮೋದಿ ಬಾಲಾಕೋಟ್ ನಲ್ಲಿದ್ದ ಉಗ್ರ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದರು. ಈಗ ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿದೆ. ಇದಕ್ಕಾಗಿ ದಶಕಗಳಿಂದಲೂ ಭಾರತ ಪ್ರಯತ್ನಿಸುತ್ತಿತ್ತು. ಇದೇ ಕಾರಣಕ್ಕೆ ದೇಶದ ಜನತೆ ಮೋದಿ ನಾಯಕತ್ವದ ಮೇಲೆ ಭರವಸೆ ಹೊಂದಿದ್ದಾರೆ ಎಂದು ಶಿವಸೇನೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com