ನವದೆಹಲಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದೊಂದಿಗಿನ ಮೈತ್ರಿ ತೊರೆಯುವ ಸಂದರ್ಭ ಎದುರಾದರೆ ಖಂಡಿತವಾಗಿಯೂ ಮೈತ್ರಿಯಿಂದ ಹೊರಬರುವುದಕ್ಕೆ ತಮ್ಮ ಪಕ್ಷ ಸಿದ್ಧವಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಮೋದಿಗೆ ಹೇಳಿದ್ದಾರೆ.
ರಾಜಸ್ಥಾನದ ಆಲ್ವಾರ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ತಮ್ಮ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಮೋದಿ, ದಲಿತ ಮಹಿಳೆಯ ಮೇಲೆ ರಾಜ್ಯದಲ್ಲಿ ಗ್ಯಾಂಗ್ ರೇಪ್ ನಡೆದರೂ ಸಹ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆ ಸರ್ಕಾರ ನಡೆಸಲು ಬಿಎಸ್ ಪಿ ಬೆಂಬಲ ಮುಂದುವರೆಸಿರುವುದನ್ನು ಪ್ರಶ್ನಿಸಿದ್ದರು.
ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಯಾವತಿ, ಈ ಅತ್ಯಾಚಾರದ ಘಟನೆಯನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ್ದಾರೆ. ಪ್ರಧಾನಿ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು.
ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿ ಅಗತ್ಯ ಸಂದರ್ಭ ಎದುರಾದರೆ ಬಿಎಸ್ ಪಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಕ್ಕೂ ಸಿದ್ಧವಿದೆ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ.