ಲಖನೌ: ಸುಳ್ಳು ಹಾಗೂ ದ್ವೇಷವನ್ನು ಹರಡುತ್ತಾ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಜನರು ಮತ್ತೆ ವಂಚನೆಗೊಳಗಾಗದಂತೆ ಕರೆ ನೀಡಿದ್ದಾರೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಜೊತೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದರು. ದೇಶದ ಜನತೆಯ ಆಶೋತ್ತರಗಳನ್ನು ಯಾರು ಈಡೇರಿಸುತ್ತಾರೆಯೇ ಅಂತಹವರಿಗೆ ಮುಂದಿನ ಪ್ರಧಾನ ಮಂತ್ರಿಯನ್ನು ಪ್ರತಿಪಕ್ಷಗಳ ಮೈತ್ರಿ ನೀಡಲಿದೆ ಎಂದರು.
ಬಿಜೆಪಿ ಸುಳ್ಳು ಹೇಳುತ್ತಾ, ದ್ವೇಷಕಾರುತ್ತ ಅಧಿಕಾರಕ್ಕೆ ಬಂದಿದೆ. ರೈತರ ಆದಾಯ ದ್ವಿಗುಣಗೊಂಡಿದೆಯಾ? ಎಂದು ಪ್ರಶ್ನಿಸಿದ ಅಖಿಲೇಶ್, ಉದ್ಯೋಗ ಇಲ್ಲದೆ ಯುವ ಜನಾಂಗ ಸಂಕಷ್ಟ ಪಡುತ್ತಿದ್ದಾರೆ .ದೇಶದಲ್ಲಿ ಅಸ್ತಿತ್ವದಲ್ಲಿದ್ದ ಉದ್ಯೋಗಗಳನ್ನು ನೋಟ್ ಅಮಾನ್ಯತೆ ಕಸಿದುಕೊಂಡಿತ್ತಲ್ಲದೇ, ಸಣ್ಣ ಉದ್ದಿಮೆದಾರರನ್ನು ಹಾಳು ಮಾಡಿತು. ಬಿಜೆಪಿ ವಂಚನೆ ಮೂಲಕ ಮತ್ತೆ ಅಧಿಕಾರಕ್ಕೆ ಯತ್ನಿಸುತ್ತಿದೆ ಎಂದು ಟೀಕಿಸಿದರು.
2017ರಲ್ಲಿ ಗೋರಖ್ ಪುರದ ಬಿಆರ್ ಡಿ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆ ಕೊರತೆಯಿಂದಾಗಿ ಮಕ್ಕಳು ಸಾವನ್ನಪ್ಪಿದ್ದಕ್ಕೆ ಯೋಗಿ ಆದಿತ್ಯ ಸರ್ಕಾರವೇ ಕಾರಣ ಎಂದು ಅಖಿಲೇಶ್ ಯಾದವ್ ದೂಷಿಸಿದರು.
Advertisement