ಗುಜರಾತ್ ಸಿಎಂ ಆಗಿ ಮೋದಿಯವರ ಪರಂಪರೆ ಅವರಿಗೆ, ಬಿಜೆಪಿಗೆ ಮತ್ತು ದೇಶಕ್ಕೆ ಕಪ್ಪು ಚುಕ್ಕೆ: ಮಾಯಾವತಿ

ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಪರಂಪರೆ ಅವರಿಗೆ ಮತ್ತು ಬಿಜೆಪಿಗೆ ...
ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಬಿಎಸ್ಪಿ ನಾಯಕಿ ಮಾಯಾವತಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಲಕ್ನೊ: ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಪರಂಪರೆ ಅವರಿಗೆ ಮತ್ತು ಬಿಜೆಪಿಗೆ ಒಂದು ಕಪ್ಪು ಚುಕ್ಕೆ, ದೇಶದ ಕೋಮು ಇತಿಹಾಸದ ಮೇಲೆ ಹೊರೆಯಾಗುತ್ತದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ವ್ಯಾಖ್ಯಾನಿಸಿದ್ದಾರೆ.
ಬಹುಜನ ಸಮಾಜವಾದಿ ಪಕ್ಷ ತಮ್ಮ ವೈಯಕ್ತಿಕ ಆಸ್ತಿ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರು ಸಭ್ಯತೆಯ ಎಲ್ಲಾ ಮಿತಿಯನ್ನು ಮೀರಿದ್ದಾರೆ. ದೇಶದಲ್ಲಿ ಬೇನಾಮಿ ಆಸ್ತಿ ಹೊಂದಿರುವ ಅನೇಕರು ಮತ್ತು ಭ್ರಷ್ಟರು ಬಿಜೆಪಿ ಜೊತೆ ಸಂಬಂಧ ಹೊಂದಿರುವವರು ಎಂದು ಇಡೀ ದೇಶಕ್ಕೆ ಗೊತ್ತಿದೆ. ಮೋದಿಯವರು ಕೇವಲ ಕಾಗದದಲ್ಲಿ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುವಂತೆ ಕಾಗದದಲ್ಲಿ ಮಾತ್ರ ಪ್ರಾಮಾಣಿಕರು ಎಂದು ಮಾಯಾವತಿ ಟೀಕಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರಾವಧಿ ಸ್ವಚ್ಛವಾಗಿತ್ತು, ಯಾವುದೇ ಭ್ರಷ್ಟಾಚಾರ ನಡೆದಿರಲಿಲ್ಲ. ನನಗಿಂತ ಹೆಚ್ಚು ಅವಧಿಯವರೆಗೆ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರ ಪರಂಪರೆ ಕೇವಲ ಅವರಿಗೆ ಮಾತ್ರವಲ್ಲದೆ ಬಿಜೆಪಿ ಮೇಲೆ ಕಪ್ಪು ಚುಕ್ಕೆಯಾಗಿದ್ದು ದೇಶದ ಕೋಮು ಇತಿಹಾಸದ ಮೇಲಿನ ಹೊರೆಯಾಗಿದೆ ಎಂದರು.
ಮೋದಿಯವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ ಮಾಯಾವತಿಯವರು ಸಾರ್ವಜನಿಕ ಜೀವನದಲ್ಲಿರಲು ಅನರ್ಹರು ಎಂದು ಹೇಳಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಕೂಡ ಮಾಯಾವತಿ ಹರಿಹಾಯ್ದಿದ್ದಾರೆ. ಮೋದಿಯವರು ಸಿಎಂ ಆಗಿ ಮಾತ್ರವಲ್ಲದೆ ದೇಶದ ಪ್ರಧಾನ ಮಂತ್ರಿಯಾಗಿ ಅವರ ಆಡಳಿತ ಅರಾಜಕತೆ, ಹಿಂಸಾಚಾರ, ಆತಂಕ ಮತ್ತು ದ್ವೇಷಗಳಿಂದ ಕೂಡಿದೆ. ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಅವರು ಅನರ್ಹರಾಗಿದ್ದು ಅಯೋಗ್ಯರು ಕೂಡ. ಭಾರತೀಯ ಸಂಸ್ಕೃತಿ ಮತ್ತು ಸಂವಿಧಾನದ ಆಶಯಗಳಿಗೆ ಮೋದಿಯವರು ಗೌರವ ಕೊಡುತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com