ಪ್ರಶಾಂತ್ ಕಿಶೋರ್ ರೂಪಿಸಿದ್ದ ಚುನಾವಣಾ ರಣತಂತ್ರದ ಅನ್ವಯ ಕೆಲಸ ಮಾಡಿದ್ದ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು, ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದರು. ಇದೇ ಹೊತ್ತಿನಲ್ಲಿ ಜಗನ್ ತಂದ ನವರತ್ನ ಯೋಜನೆ ಮತದಾರರ ಗಮನ ಸೆಳೆಯಿತು. ತಮ್ಮ ಪ್ರಣಾಳಿಕೆಯಲ್ಲಿ ಒಂಭತ್ತು ಪ್ರಮುಖ ವಿಚಾರಗಳ ಕುರಿತು ಪ್ರಸ್ತಾಪ ಮಾಡಿದ್ದ ಜಗನ್, ಆರೋಗ್ಯ, ಶಿಕ್ಷಣ, ರೈತರ ಸಮಸ್ಯೆಗಳು, ಮಹಿಳಾ ಪರ ಯೋಜನೆಗಳು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತಂತೆ ತಮ್ಮ ಯೋಜನೆಗಳನ್ನು ರೂಪಿಸಿದ್ದರು. ಇದೇ ವೇಳೆ ಚುನಾವಣೆಗಾಗಿಯೇ ರಚಿಸಲಾದ ರಾವಾಲಿ ಜಗನ್(ಜಗನ್ ಬರಬೇಕು), ಕಾವಾಲಿ ಜಗನ್ (ಜಗನ್ ಬೇಕು) ಅಭಿಯಾನದ ಹಾಡು ನಿಜಕ್ಕೂ ವೈರಲ್ ಆಗಿತ್ತು, ಯೂಟ್ಯೂಬ್ ನಲ್ಲಿ ಈ ಹಾಡು ಬರೊಬ್ಬರಿ 2.2 ಕೋಟಿ ವೀಕ್ಷಕರ ಸೆಳೆದಿತ್ತು.