ಎಲ್ಲರ ದುಡ್ಡು ನನ್ನದೇ ಎನ್ನುವುದು ಬಿಜೆಪಿಯ ಬುದ್ಧಿ -ಖುಷ್ಬು

ನಿನ್ನ ದುಡ್ಡು ನನ್ನದು, ನನ್ನ ದುಡ್ಡೂ ನನ್ನದೇ ಎಲ್ಲರ ದುಡ್ಡು ನನ್ನದೇ ಎನ್ನುವುದು ಬಿಜೆಪಿಯ ಬುದ್ಧಿ.....
ಖುಷ್ಬು
ಖುಷ್ಬು
ಬೆಂಗಳೂರು: ನಿನ್ನ ದುಡ್ಡು ನನ್ನದು, ನನ್ನ ದುಡ್ಡೂ ನನ್ನದೇ ಎಲ್ಲರ ದುಡ್ಡು ನನ್ನದೇ
 ಎನ್ನುವುದು ಬಿಜೆಪಿಯ ಬುದ್ಧಿ. 56 ಇಂಚಿನ ಎದೆಯುಳ್ಳ ಚೌಕಿದಾರ ರಫೇಲ್ ಕಡತ ಕಳ್ಳತನ ಹೇಗಾಯಿತು ಎನ್ನವುದನ್ನು ಸ್ಪಷ್ಟಪಡಿಸಬೇಕು ಎಂದು ಎಐಸಿಸಿ ವಕ್ತಾರೆ ಖುಷ್ಬು ಸುಂದರ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಯಂಘೋಷಿತ ಚೌಕಿದಾರ್ ದೇಶದ ರಕ್ಷಣೆ ಮಾಡಬೇಕೇ ಹೊರತು ದೇಶವನ್ನು ಲೂಟಿ ಹೊಡೆಯುವುದನಲ್ಲ. ಬಿಜೆಪಿ ಸರ್ಕಾರದ ಐದು ವರ್ಷಗಳ ಆಡಳಿತದಿಂದಾಗಿ ದೇಶ 20 ವರ್ಷಗಳ ಹಿಂದಕ್ಕೆ ಹೋಗಿದ್ದು, ಜಿಎಸ್‌ಟಿ, ನೋಟು ಅಮಾನ್ಯೀಕರಣದಿಂದ ದೇಶದ ವ್ಯಾಪಾರಿಗಳು, ಸಾಮಾನ್ಯ ಜನರು, ರೈತರು ನರಳುವಂತಾಗಿದೆ ಎಂದು ಅವರು ಟೀಕಿಸಿದರು.
ಜಿಎಸ್‌ಟಿ ಕಾಂಗ್ರೆಸ್‌ನ ಯೋಜನೆಯಾಗಿದ್ದರೂ ಬಿಜೆಪಿ ಅದನ್ನು ಅಸಮರ್ಪಕ ರೀತಿಯಲ್ಲಿ ಜಾರಿಗೊಳಿಸಿದ್ದರಿಂದ ದೇಶದ ಕೋಟ್ಯಂತರ ವ್ಯಾಪಾರಿಗಳು, ಉದ್ಯಮಿಗಳಿಗೆ ತೊಂದರೆಯಾಗಿದೆ. ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ. ಈಗಲೂ ಅದರ ಪರಿಣಾಮ ಕಂಡುಬರುತ್ತಿದೆ. ಕಾಂಗ್ರೆಸ್‌ನ ಪ್ರಣಾಳಿಕೆ ಬಿಜೆಪಿಯ ಪ್ರಣಾಳಿಕೆಯಂತೆ ಕೇವಲ ಕಾಗದದ ತುಂಡಲ್ಲ. ಜನರ ಬದುಕನ್ನು ಹಸನುಗೊಳಿಸುವ ಮಹತ್ತರ ಯೋಜನೆಗಳನ್ನು ಹೊಂದಿರುವ ವಾಗ್ದಾನವಾಗಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ಜನಸಾಮಾನ್ಯರ ಅಭಿವೃದ್ಧಿ, ದೇಶದ ಪ್ರಗತಿ, ಜಾತ್ಯತೀತ, ಉದ್ಯೋಗ, ಗಡಿ, ಸೈನ್ಯ, ದೇಶರಕ್ಷಣೆ ಸೇರಿದಂತೆ ಸಮಗ್ರ ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯಾಗಿದೆ ಎಂದು ಸ್ವಪಕ್ಷದ ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು.
ಚೋರ್ ಪಕ್ಷದ ಚೌಕಿದಾರ್ ಅವರು ಮನ್ರೇಗಾವನ್ನು ವಿರೋಧಿಸುತ್ತಾರೆ, ಆದರೆ ಮನ್ರೇಗಾ ಯೋಜನೆಯಿಂದ ಲಕ್ಷಾಂತರ ಬಡಜನರಿಗೆ ಉದ್ಯೋಗ ದೊರಕಿದೆ. ಮೋದಿ ಆಡಳಿತದ 5 ವರ್ಷಗಳಲ್ಲಿ ಜನರು ಬೇಸತ್ತಿದ್ದಾರೆ, ದೇಶದ ಆರ್ಥಿಕತೆ ಕುಸಿದಿದೆ. 72 ವರ್ಷಗಳಲ್ಲಿ  ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಿದೆ.  ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನು ಕಾಂಗ್ರೆಸ್ ಜಾರಿ ಮಾಡಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆಯಾದರೂ ಏನು ? ಜುಮ್ಲಾ  ಬಿಜೆಪಿ  2014 ರಲ್ಲಿ ಜನರಿಗೆ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿವೆ, ಸುಳ್ಳಿನಿಂದನೇ ಭರವಸೆ ಆರಂಭಿಸಿ ಸುಳ್ಳಿನಿಂದಲೇ ಬಿಜೆಪಿ ಆಡಳಿತ ಅಂತ್ಯಗೊಳಿಸಿದೆ ಎಂದು ಟೀಕಿಸಿದರು.
ಬಿಜೆಪಿ ಪ್ರಣಾಳಿಕೆ ಕೇವಲ ಮತಬ್ಯಾಂಕ್ ಪ್ರಣಾಳಿಕೆಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಕೇವಲ ಮತಗಳಿಕೆಯೊಂದೇ ನಮ್ಮ ಉದ್ದೇಶವಲ್ಲ. ದೇಶದ ಪ್ರಗತಿ, ಜನರ ರಕ್ಷಣೆಗೆ  ಮೊದಲ ಆದ್ಯತೆ ನೀಡಲಾಗಿದೆ. ಗಡಿ ರಕ್ಷಣೆಯಲ್ಲಿರುವ ಸೈನಿಕರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೂ ನಿಜವಾದ ಗೌರವ ಇದೆ. ಸೈನಿಕರ ಹೋರಾಟವನ್ನು ರಾಜಕೀಯಗೊಳಿಸುವ ಬಿಜೆಪಿಯ ದುರುದ್ದೇಶದ ರಾಜಕಾರಣ ಸಫಲವಾಗದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕ ಆರ್ಥಿಕ ಸಾಲ ಕೊಡುವ ಕೆಲಸವನ್ನು ಯುಪಿಎ ಸರ್ಕಾರ ಮಾಡಿತ್ತು. ಮೋದಿ ಪ್ರಧಾನಿಯಂತೆ ಕೆಲಸ ಮಾಡುತ್ತಿಲ್ಲ. ಅವರು ಸರ್ವಾಧಿಕಾರಿಯಂತೆ ಕೆಲಸ ಮಾಡುತ್ತಿದ್ದಾರೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಖುಷ್ಬು ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com