ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಎಸ್. ತೇಜಸ್ವಿ ಸೂರ್ಯ ಅವರು ನಗರದ ಸಿವಿಲ್ ಕೋರ್ಟ್ ಮೆಟ್ಟಿಲೇರಿ, ಮಾಧ್ಯಮಗಳಲ್ಲಿ ತಮ್ಮ ವಿರುದ್ದ ಯಾವುದೇ ಅವಹೇಳನಕಾರಿ ವರದಿ ಪ್ರಕಟಿಸದಂತೆ ತಡೆಯಾಜ್ಞೆ ಪಡೆದಿದ್ದಾರೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಓರ್ವ ಚುನಾವಣಾ ಅಭ್ಯರ್ಥಿಯ ಪೂರ್ವಾಪರ ಮತ್ತು ಅವರ ಕುರಿತಾದ ಮಾಹಿತಿಯನ್ನು ಅರಿಯುವ ಹಕ್ಕು ಮತದಾರರಿಗೆ ಇದೆ. ಇದನ್ನು ನಿರ್ಬಂಧಿಸುವುದು ಮತದಾರರ ಹಕ್ಕು ಮೊಟಕುಗೊಳಿಸಿದಂತೆ. ಅಲ್ಲದೆ, ಚುನಾವಣೆ ವಿಚಾರದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವಂತಿಲ್ಲ. ಆದ್ದರಿಂದ ನೀತಿ ಸಂಹಿತೆ ಜಾರಿಯಲ್ಲಿರುವಾಗ ತೇಜಸ್ವಿ ಪರ ಅಧೀನ ನ್ಯಾಯಾಲಯ ನೀಡಿದ ತೀರ್ಪು ನಿಯಮಬಾಹಿರವಾದುದು ಎಂದು ವಾದಿಸಿದರು.