ಮೈಸೂರಲ್ಲಿ ನಾವು ಸೋತರೆ ಸರ್ಕಾರ ಇರುತ್ತಾ..!; ಜೆಡಿಎಸ್​ ಗೆ ವೇದಿಕೆಯಲ್ಲೇ ಪರೋಕ್ಷ ಎಚ್ಚರಿಕೆ ಕೊಟ್ಟ ಸಿದ್ದು

ಮೈಸೂರಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಮೈತ್ರಿ ಸರ್ಕಾರಕ್ಕೇ ಅಪಾಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ
ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ
ಮೈಸೂರು: ಮೈಸೂರಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಮೈತ್ರಿ ಸರ್ಕಾರಕ್ಕೇ ಅಪಾಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಜಯಪುರದಲ್ಲಿ ಜಿಟಿ ದೇವೇಗೌಡ ಸೇರಿದಂತೆ ಜೆಡಿಎಸ್​ ನಾಯಕರೊಂದಿಗೆ ಜಂಟಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, 'ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ. ಮೈತ್ರಿ ಸರ್ಕಾರ ಐದು ವರ್ಷ ನಡೆಯಬೇಕು. ನಾವು ಸೋತರೆ ಸರ್ಕಾರ ಇರುತ್ತದೆಯಾ. ನಮ್ಮ ಅಭ್ಯರ್ಥಿ ಸೋತರೆ ಅದಕ್ಕೆ ನೀವೇ ಕಾರಣ. ಇದು ಮುಂದೆ ಮೈತ್ರಿಗೆ ಎಳ್ಳುನೀರು ಬಿಡಬೇಕಾದ ಪರಿಸ್ಥಿತಿ ಉದ್ಭವವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಗಳ ಮುನಿಸಿನ ವಿಚಾರ ಈಗಾಗಲೇ ಬಹಿರಂಗಗೊಂಡಿದೆ. ಮೈತ್ರಿ ಅಭ್ಯರ್ಥಿ ವಿಜಯ್​ ಶಂಕರ್​ ಪರ ಜೆಡಿಎಸ್​ ನಾಯಕರು ಪ್ರಚಾರದಲ್ಲಿ ಭಾಗಿಯಾಗದಿರುವ ಬಗ್ಗೆ ಸಮಾವೇಶದಲ್ಲಿ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ. 'ಈ ಮೈತ್ರಿ ಸರ್ಕಾರದಲ್ಲಿ ನಾನು ಮಂತ್ರಿಯಲ್ಲ, ಮುಖ್ಯಮಂತ್ರಿ ಆಗಿರುವುದು ಕುಮಾರಸ್ವಾಮಿ. ಮಂತ್ರಿ ಆಗಿರುವುದು ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಮೈತ್ರಿ ಅಭ್ಯರ್ಥಿಗಳು ಗೆಲ್ಲಲೇಬೇಕು‌, ನಾವು ಗೆಲ್ಲಬೇಕು‌. ನಾವು ಸೋತರೆ ಸರ್ಕಾರ ಇರುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 
ಮೈಸೂರಿನಲ್ಲಿ ಮೊದಲ ಬಾರಿಗೆ ಜಿಟಿಡಿ ಮತ್ತು ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಸಮಾವೇಶ ನಡೆಸಿದರು. ಈ ವೇಳೆ ಮಾತಿನಲ್ಲೇ ಚುಚ್ಚಿದ ಸಿದ್ದರಾಮಯ್ಯ, ಮೈತ್ರಿ ಗೆಲುವು ಇಲ್ಲಿನ ಸಚಿವರಿಗೆ ಅನಿವಾರ್ಯ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಳಿಕ ಕಡುವೈರಿಗಳಾಗಿದ್ದ ಜಿಟಿ ದೇವೇಗೌಡ, ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸದೆ 10 ದಿನಗಳ ಕಾಲ ಕಣ್ಮರೆಯಾಗಿದ್ದರು. ಮಂಡ್ಯದಲ್ಲಿ ನಮಗೆ ಸಹಾಯ ಮಾಡಿದರೆ ಅಷ್ಟೇ ಮಾತ್ರ, ನಾವು ಮೈಸೂರಿನಲ್ಲಿ ಬೆಂಬಲಿಸುತ್ತೇವೆ ಎಂದು ಜಿಟಿಡಿ ಹೇಳಿದ್ದರು. ಅದರಂತೆ ಸಿದ್ದರಾಮಯ್ಯ ಮಂಡ್ಯಕ್ಕೆ ತೆರಳಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಇಂದು ಮೊದಲ ಬಾರಿಗೆ ಜಿಟಿಡಿ ಮತ್ತು ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಸಮಾವೇಶ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com