ಮಂಡ್ಯದಲ್ಲಿ ಮತ್ತೆ ಐಟಿ ದಾಳಿ ಮುಂದುವರೆದಿದೆ. ಜೆಡಿಎಸ್ ಮುಖಂಡ, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಸಿ ತಮ್ಮಣ್ಣ ಆಪ್ತ ಸಾದೊಳಲು ಸ್ವಾಮಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಾಮಿ ಜಿ.ಪಂ ಅಧ್ಯಕ್ಷೆ ನಾಗರತ್ನ ಎಂಬವರ ಪತಿಯಾಗಿದ್ದು, ಮೈಸೂರು ವಲಯದ ಜೆಡಿಎಸ್ ವೀಕ್ಷಕರಾಗಿದ್ದರು. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಸಚಿವ ಪುಟ್ಟರಾಜು ಬೆಂಬಲಿಗನಿಗೂ ಐಟಿ ಶಾಕ್ ನೀಡಿದೆ. ಪಾಂಡವಪುರದ ಜಿ.ಪಂ ಸದಸ್ಯ, ಸಚಿವ ಪುಟ್ಟರಾಜು ಆಪ್ತ ತಿಮ್ಮೇಗೌಡರ ಮನೆ, ಕಚೇರಿ, ಪೆಟ್ರೋಲ್ ಬಂಕ್ ಹಾಗೂ ಸಾಮಿಲ್ ಮೇಲೆ ಏಕ ಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಗೆ ಹಣ ಸಂಗ್ರಹ, ಮುಂದಾಳತ್ವ ಹಾಗೂ ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ 8 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.