ಯಾದಗಿರಿ: ಚುನಾವಣಾ ಕರ್ತವ್ಯದ ವೇಳೆ ಹೃದಯಾಘಾತದಿಂದ ಶಿಕ್ಷಕ ಸಾವು

ಯಾದಗಿರಿ ಜಿಲ್ಲೆಯ ಸುರಪುರದ ಎಸ್ ಪಿ ಕಾಲೇಜಿನಲ್ಲಿ ಮತಯಂತ್ರಗಳ ಮಸ್ಟರಿಂಗ್ ವೇಳೆ ಶಾಲಾ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರದ ಎಸ್ ಪಿ ಕಾಲೇಜಿನಲ್ಲಿ ಮತಯಂತ್ರಗಳ ಮಸ್ಟರಿಂಗ್ ವೇಳೆ ಶಾಲಾ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಆಳಂದ ತಾಲೂಕಿನ ನಿವಾಸಿ ಶಿವಪುತ್ರ(50) ಮೃತ ಶಾಲಾ ಶಿಕ್ಷಕರು. ಶಿವಪುತ್ರ ಅವರು ಶಹಾಪುರ ತಾಲೂಕಿನ ಹಳೇಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ಅವರು ನಿಯೋಜನೆಯಾಗಿದ್ದರು.
ನಾಳೆ ಮತದಾನ ಹಿನ್ನಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಸುರಪುರದ ಎಸ್.ಪಿ ಕಾಲೇಜು ಮೈದಾನಕ್ಕೆ ಬಂದಿದ್ದರು. ಮತಯಂತ್ರಗಳ ಮಾಸ್ಟರಿಂಗ್ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಏಕಾಏಕಿ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೊದಲಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನದ ವೇಳೆ(ಏಪ್ರಿಲ್ 18) ಚಾಮರಾಜ ನಗರದಲ್ಲಿ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ(48) ಹೃದಯಾಘಾತದಿಂದ ಮೃತಪಟ್ಟಿದ್ದರು. ಸುಲ್ತಾನ ಷರೀಫ್ ಸರ್ಕಲ್ ಬಳಿ ಮತಗಟ್ಟೆ ಸಂಖ್ಯೆ 48 ರಲ್ಲಿ ಇವರು ಚುನಾವಣಾ ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದ್ದರು. ಶಾಂತಮೂರ್ತಿ ಹನೂರು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಚುನಾವಣಾ ತರಬೇತಿ ವೇಳೆ ಕೆಕ್ಕಲಕೋಟೆ ಗ್ರಾಮದ  ಶಿಕ್ಷಕ ಬಿ.ರಮೇಶ್(46) ಸಾವನ್ನಪ್ಪಿದ್ದರು. ಬಿ.ರಮೇಶ್ ಅವರು ಸಿರಗುಪ್ಪದ ಆರನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪೂಲಿಂಗ್ ಆಫೀಸರ್ ಆಗಿ ನೇಮಕವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com