ಎನ್ಡಿಎಗೆ ಜೈ ಎಂದ ಎಕ್ಸಿಟ್ ಪೋಲ್: ಇವಿಎಂ ಬಗ್ಗೆ ಅನುಮಾನ ಎಂದ ಡಿಸಿಎಂ ಪರಮೇಶ್ವರ್

ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ.‌ ಆದರೆ ವಸ್ತುಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಭವಿಷ್ಯ ನುಡಿದಿದ್ದಾರೆ.
ಡಾ.ಜಿ. ಪರಮೇಶ್ವರ
ಡಾ.ಜಿ. ಪರಮೇಶ್ವರ
ಬೆಂಗಳೂರು: ಬಿಜೆಪಿ ಪರವಾದ ಫಲಿತಾಂಶ ಸಮೀಕ್ಷೆ ಅವರೇ ಹೇಳಿ ಮಾಡಿಸಿದ ರೀತಿ ವರದಿ ಇದೆ.‌ ಆದರೆ ವಸ್ತುಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಭವಿಷ್ಯ ನುಡಿದಿದ್ದಾರೆ.
ಸದಾಶಿವನಗರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 300-400 ಸೀಟು ಬರುತ್ತದೆ ಎಂದು ಎಕ್ಸಿಟ್‌ ಪೋಲ್ ಮೂಲಕ ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ವಾಸ್ತವದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಿದಾಗಲೂ ಇದೇ ಅಭಿಪ್ರಾಯ ಕೇಳಿ ಬಂದಿದೆ.
ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರಲಿದೆ ಎಂಬ ವರದಿಯನ್ನು ನಂಬಲಾದರೂ ಸಾಧ್ಯವೇ? ಎಂದು ಹೇಳಿದರು.
ಈ ಬಾರಿ ಸಮೀಕ್ಷಾ ವರದಿ ಸಂಪೂರ್ಣ ತಪ್ಪಿದೆ. ಅದರಲ್ಲೂ ಕರ್ನಾಟಕದ ಸ್ಥಿತಿ ಗೊತ್ತಿದೆ. ಜೆಡಿಎಸ್‌ ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಇವಿಎಂ ಬೇಡ, ಬ್ಯಾಲೆಟ್ ಪೇಪರ್‌ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯ ಬಗ್ಗೆ ಉದಾಹರಣೆ ನೋಡಿದ್ದೇವೆ.‌ ಆ ಅನುಮಾನವೂ ಮೂಡಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
ನಾನು ಯಾವುದೇ ಊಹೆ ಮಾಡುವುದಕ್ಕೆ ಹೋಗುವುದಿಲ್ಲ. ಏನೇ ಆಗಲಿ ರಾಜ್ಯ ಸರ್ಕಾರ ಸುಭದ್ರವಾಗಿರುತ್ತದೆ, ನನಗೆ ಮತದಾನೋತ್ತರ ಸಮೀಕ್ಷೆಗಳಲ್ಲಿ ವಿಶ್ವಾಸ ಇಲ್ಲ, ವಾಸ್ತವಿಕತೆ ಬೇರೆ ರೀತಿಯಲ್ಲಿರುತ್ತದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂಬುದು ನಮ್ಮ ಸಮೀಕ್ಷೆಯ ಲೆಕ್ಕಾಚಾರ, ವಾತಾವರಣ ಕೂಡಾ ಹಾಗೆ ಇದೆ. ಚುನಾವಣಾ ಪ್ರಚಾರ, ಜನರ ಭಾವನೆಗಳನ್ನು ಗಮನಿಸಿ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com