ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರದ ಮುಖಂಡರಾದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಸಸಭೆ ಚುನಾವಣಾ ಪ್ರಚಾರದ ವೇಳೆ , ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಒಟ್ಟು 20 ಸೀಟು ಗೆಲ್ಲಲಿದೆ, ಬಿಜೆಪಿ ಒಂದಂಕಿ ಸಾಧನೆ ಮಾಡಲಿದೆ ಎಂದು ಹೇಳಿದ್ದರು.
ಆದರೆ ಭಾನುವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಸಿದ್ದರಾಮಯ್ಯ-ದೇವೇಗೌಡರ ಒಗ್ಗೂಡಿಕೆ ಕೆಲಸ ಮಾಡಿಲ್ಲ, ಎರಡು ಪಕ್ಷಗಳ ಮುಖಂಡರು ತಮ್ಮ ತವರಿನಲ್ಲೇ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಳಪೆ ಸಾಧನೆ ಮಾಡಿದರೇ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ಬರಲಿದೆ. ಸಿದ್ದರಾಮಯ್ಯ ಅವರ ಹಿಂಬಾಲಕರು ಅವರನ್ನು ಪ್ರಶ್ನೆ ಮಾಡಲಿದ್ದಾರೆ. ಒಕ್ಕಲಿಗರ ತವರಿನಲ್ಲೇ ಗೌಡರ ಅಸ್ತಿತ್ವದ ಬಗ್ಗೆ ಪ್ರಶ್ನೆ ಏಳುತ್ತದೆ.
ನಾಯಕರುಗಳನ್ನು ಒಟ್ಟಾಗಿ ಕರೆತಂದು ಪ್ರಚಾರ ಮಾಡಲು ವೈಫಲ್ಯತೆ ಹಾಗೂ ಚುನವಣಾ ತಂತ್ರಗಳನ್ನು ಹೆಣೆಯಲು ವಿಪಲರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ಕಾಂಗ್ರೆಸ್ ಮೈಸೂರು ಲೋಕಸಭೆ ಕ್ಷೇತ್ರವನ್ನು ಕಳೆದುಕೊಳ್ಳುತ್ತದೆ ಎಂಬುದಾಗಿ ಹೇಳಲಾಗಿದೆ, ತವರು ಜಿಲ್ಲೆಯಲ್ಲಿನ ಸೋಲು ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೀಡು ಮಾಡುವ ಸಾಧ್ಯತೆಯಿದೆ.ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ತುಂಬಾ ಶ್ರಮ ಪಟ್ಟಿದ್ದರು,
ಒಂದು ವೇಳೆ ಮೈಸೂರು ಗೆದ್ದರೇ ಸಿದ್ದರಾಮಯ್ಯ ಅವರು ಕ್ಷೇತ್ರದ ಮೇಲೆ ಹಿಡಿತ ಸಾಧಿಸಲಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತ ಮೇಲೆ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಂಡಿದ್ದರು.
ಮಂಡ್ಯ, ಹಾಸನ ಗಳಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯ ಮತ್ತು ಹಾಸನ ಎರಡು ಕ್ಷೇತ್ರಗಳು ಜೆಡಿಎಸ್ ಹಾಗೂ ದೇವೇಗೌಡರಿಗೆ ಕಬ್ಬಿಣದ ಕಡಲೆಯಾಗಿದೆ, ತುಮಕೂರಿನಲ್ಲಿ ಕೂಡ ದೇವೇಗೌಡರಿಗೆ ಕೆಲ ಕಠಿಣ ಪರಿಸ್ಥಿಗಳು ಎದುರಾಗಿದ್ದವು.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೆ ಬಿಜೆಪಿ ಸಾಮಾನ್ಯ ವಿರೋಧಿ, ಎರಡು ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಎದುರಿಸಲು ಸಿದ್ದವಾಗಿದ್ದವು. ಒಂದು ವೇಳೆ ಸಮೀಕ್ಷೆ ನಿಜವಾಗಿದ್ದರೇ ಸಿದ್ದರಾಮಯ್ಯ ಮತ್ತು ದೇವೇಗೌಡರು ನಗೆಪಾಟಲೀಗೀಡಾಗುವುದು ಖಚಿತ.