ಭಾರತದ ಮತದಾರರು ಭಾವುಕರಾಗಿರುವ ಕಾರಣದಿಂದಲೋ ಏನೋ ಬಿಜೆಪಿಯ ಭಾವನಾತ್ಮಕ ವಿಚಾರಗಳ ಅಲೆಯಲ್ಲಿ ತೇಲಿಹೋದಂತೆ ಕಾಣಿಸುತ್ತದೆ ಎಂದು ಸಿದ್ದರಾಮಯ್ಯ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ. ಸತ್ಯ ಯಾವಾಗಲೂ ಕಹಿ, ಸುಳ್ಳು ಸಿಹಿ. ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲವಾದರೂ ಒಮ್ಮೊಮ್ಮೆ ಜನ ಆ ಸಿಹಿಯನ್ನೇ ಇಷ್ಟಪಡುತ್ತಾರೆ. ವೈಯಕ್ತಿಕವಾಗಿ ಸೈದ್ಧಾಂತಿಕ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ತಾವು, ಸಮಸಮಾಜ ನಿರ್ಮಾಣದ ಕನಸು ಹೊತ್ತು ರಾಜಕೀಯ ಪ್ರವೇಶಿಸಿದ್ದು, ಅಧಿಕಾರದಲ್ಲಿದ್ದಾಗೆಲ್ಲ ಸಾಮಾಜಿಕ ನ್ಯಾಯಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಚುನಾವಣಾ ಸೋಲಿನ ಹೊರತಾಗಿಯೂ ತಮ್ಮ ಹೋರಾಟ ಮುಂದುವರಿಯಲಿದ್ದು, ಗೆಲುವು ಬಂದಾಗ ಹಿಗ್ಗದೇ ಸೋತಾಗ ಕುಗ್ಗದೇ ಮುನ್ನಡೆಯಬೇಕು. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಎರಡನ್ನೂ ಸಮಚಿತ್ತರದಿಂದ ಸ್ವೀಕರಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.