ಬೆಂಗಳೂರು: ರಾಜ್ಯಾದ್ಯಂತ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮತ್ತು ಅನುಚಿತ ವರ್ತನೆ ತೋರುತ್ತಿರುವ ಯುವ ಜನಾಂಗದಲ್ಲಿಯೇ ಕೊರೋನಾವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಒಟ್ಟಾರೇ 474 ಸೋಂಕಿತರ ಪೈಕಿಯಲ್ಲಿ 292 ಮಂದಿ 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ
ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೋವಿಡ್-19 ಬರಲಿದೆ ಅಂತಾ ತಿಳಿದುಕೊಂಡಿದ್ದ ತಜ್ಞರಿಗೆ ಈ ಸಂಖ್ಯೆ ಎಚ್ಚರಿಕೆ ನೀಡಿದೆ
ಆದಾಗ್ಯೂ,18 ಸಾವು ಪ್ರಕರಣಗಳ ಪೈಕಿಯಲ್ಲಿ ಇಬ್ಬರು ಮಾತ್ರ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಉಳಿದವರೆಲ್ಲ ವೃದ್ದರಾಗಿದ್ದಾರೆ.ಯುವ ರೋಗಿಗಳಿಗಿಂತ ವೃದ್ಧರಲ್ಲಿಯೇ ಹೆಚ್ಚಾಗಿ ಪರಿಣಾಮ ಬೀರುತ್ತಿರುವುದು ಕಂಡುಬಂದಿದೆ.
ರಾಜ್ಯ ಕೋವಿಡ್-19 ವಾರ್ ರೂಮ್ ನಿಂದ ಬಿಡುಗಡೆಯಾಗಿರುವ ಅಂಕಿಸಂಖ್ಯೆಗಳನ್ನು ಗಮನಿಸಿದರೆ, ಕೇವಲ 68 ಕೋವಿಡ್-19 ಸೋಂಕಿತರು ಮಾತ್ರ 60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರಾಗಿದ್ದಾರೆ. 234 ರೋಗಿಗಳು 40 ರಿಂದ 20 ವರ್ಷದೊಳಗಿನವರಾಗಿದ್ದಾರೆ. 118 ರೋಗಿಗಳು 30ರಿಂದ 40 ವರ್ಷದವರಾಗಿದ್ದಾರೆ. 116 ಮಂದಿ 20 ರಿಂದ 30 ವರ್ಷದವರಾಗಿದ್ದಾರೆ. ಒಟ್ಟಾರೇ 474 ರೋಗಿಗಳ ಪೈಕಿಯಲ್ಲಿ 406 ರೋಗಿಗಳು 40 ವರ್ಷದೊಳಗಿನವರಾಗಿದ್ದಾರೆ.
ಯುವಕರು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದ್ದು, ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು, ಲಾಕ್ ಡೌನ್ ತೆರವಾದ ನಂತರವೂ ಸಾಂಕ್ರಾಮಿಕ ಕಾಯಿಲೆ ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಲಾಕ್ ಡೌನ್ ನಿಯಮ ಸಡಿಲಿಕೆ ನಂತರ ಕೆಲಸಕ್ಕೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ರಾಜ್ಯ ಕೋವಿಡ್ -19 ಟಾಸ್ಕ್ ಪೋರ್ಸ್ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ಸಡಿಲಿಕೆ ಅಥವಾ ಸಂಪೂರ್ಣವಾಗಿ ತೆಗೆದುಹಾಕಿದ ನಂತರ ನಾವು ವೈರಸ್ನಿಂದ ಮುಕ್ತರಾಗುತ್ತೇವೆ ಎಂದು ಭಾವಿಸುವುದು ತಪ್ಪು.ಲಾಕ್ಡೌನ್ ಅನ್ನು ತೆಗೆದುಹಾಕಿದ ನಂತರ ಕನಿಷ್ಠ ಎಂಟು ವಾರಗಳವರೆಗೆ ಇದು ಎಲ್ಲಾ ವಯಸ್ಸಿನವರಿಗೆ ಒಂದು ನಿರ್ಣಾಯಕ ಘಟ್ಟವಾಗಿದೆ, ಮತ್ತು ಜನರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಸಿ. ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.
ಸೋಂಕು ಉಂಟಾಗುವಲ್ಲಿ ವಯಸ್ಸು ಮಾನದಂಡವಾಗಿರುವುದಿಲ್ಲ, ಪ್ರಪಂಚದಾದ್ಯಂತದ ದತ್ತಾಂಶವು 40 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಸಣ್ಣ ಶೇಕಡಾವಾರು ಪ್ರಮಾಣವನ್ನು ಹೊಂದಿದೆ, ಯಾವುದೇ ರೋಗವಿಲ್ಲದಿದ್ದರೂ ಸಹ ಅವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯೆ ಡಾ. ಸ್ವಾತಿ ರಾಜಗೋಪಾಲ್ ತಿಳಿಸಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಲಾಕ್ ಡೌನ್ ತೆರವಿನ ನಂತರವೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ಹೇಳಿದ್ದಾರೆ.
ಯುವಕರು ರೋಗ ನಿರೋಧಕ ಶಕ್ತಿ ಹೊಂದಿರುವುದರಿಂದ ಹೆಚ್ಚಾಗಿ ಸೋಂಕು ತಗಲುವುದಿಲ್ಲ. ಆದರೆ, ಸೋಂಕು ಬಾರದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ. ಹೆಚ್. ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.
Advertisement