ಕರ್ನಾಟಕವನ್ನು ಆಳಿದ ಪ್ರಮುಖ ರಾಜರು ಮತ್ತು ಪಾಳೆಗಾರರು

ಭಾರತ ದೇಶದ ದಕ್ಷಿಣದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಅನೇಕ ರಾಜ-ಮಹಾರಾಜರುಗಳು ಆಳಿ ಹೋಗಿದ್ದಾರೆ. ಅವರ ಹೆಸರುಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರ ಆಳ್ವಿಕೆ, ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ್ದು, ಸಾಹಿತ್ಯ-ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು.
ಕರ್ನಾಟಕವನ್ನು ಆಳಿದ ಪ್ರಮುಖ ರಾಜರು ಮತ್ತು ಪಾಳೆಗಾರರು
ಕರ್ನಾಟಕವನ್ನು ಆಳಿದ ಪ್ರಮುಖ ರಾಜರು ಮತ್ತು ಪಾಳೆಗಾರರು

ಭಾರತ ದೇಶದ ದಕ್ಷಿಣದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಅನೇಕ ರಾಜ-ಮಹಾರಾಜರುಗಳು ಆಳಿ ಹೋಗಿದ್ದಾರೆ. ಅವರ ಹೆಸರುಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರ ಆಳ್ವಿಕೆ, ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ್ದು, ಸಾಹಿತ್ಯ-ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು.

ಕರ್ನಾಟಕ ಏಕೀಕರಣಕ್ಕೂ ಮುನ್ನ ರಾಜರುಗಳು ಒಂದೊಂದು ಪ್ರಾಂತ್ಯಗಳನ್ನಾಳುತ್ತಿದ್ದರು.ನಮ್ಮ ರಾಜ್ಯಕ್ಕೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ರಾಜರುಗಳಲ್ಲಿ ಕದಂಬರು, ಶಾತವಾಹನರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ರಾಜರ ಆಳ್ವಿಕೆ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ನಮ್ಮ ರಾಜ್ಯದಲ್ಲಿ ಆಳಿದ ಮಹಾರಾಜರು, ರಾಣಿಯರ ಹೆಸರುಗಳನ್ನು ಹುಡುಕಿದರೆ ಪ್ರಮುಖವಾಗಿ ಕೇಳಿಬರುವ ಹೆಸರುಗಳು ಅಬ್ಬಕ್ಕ ರಾಣಿ, ಹೈದರ್ ಆಲಿ, ಜಯಚಾಮರಾಜೇಂದ್ರ ಒಡೆಯರ್, ಕೆಂಪೇಗೌಡ, ಕೃಷ್ಣದೇವರಾಯ, ಮದಕರಿ ನಾಯಕ, ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ ಮೊದಲಾದವರು ಒಂದೊಂದು ಪ್ರಾಂತ್ಯಗಳನ್ನು ಆಳಿ ಆ ಪ್ರದೇಶದ ಉಳಿವು-ಬೆಳೆಯುವಿಕೆಗೆ ಕಾರಣರಾದರು.

ಅಬ್ಬಕ್ಕ ರಾಣಿ: ತುಳುನಾಡಿನ ರಾಣಿ ಅಬ್ಬಕ್ಕ ದೇವಿ ಎಂದೇ ಜನಪ್ರಿಯರಾದ  ಇವರು ೧೬ನೇ ಶತಮಾನದಲ್ಲಿ ಪೋರ್ಚುಗೀಸರೊಡನೆ ಹೋರಾಡಿದ್ದರು. ದಕ್ಷಿಣ ಕನ್ನ ಡ ಜಿಲ್ಲೆಯ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳ ಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು.

ಕಿತ್ತೂರು ರಾಣಿ ಚೆನ್ನಮ್ಮ: ಕನ್ನಡ ನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ-ಸಾಹಸ ಚೆನ್ನಮ್ಮನ ಕೀರ್ತಿಯನ್ನು ಅಜರಾಮರವಾಗಿಸಿ ಉತ್ತುಂಗದ ಶಿಖರಕ್ಕೇರಿಸಿದೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ.

ಸಂಗೊಳ್ಳಿ ರಾಯಣ್ಣ - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾಗಿದ್ದವನು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ.

ಕೃಷ್ಣದೇವರಾಯ: ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉತ್ತುಂಗಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ ಬಿರುದಾಂಕಿತನಾದ ಈತನ ಕಾಲದ ವಿಜಯನಗರ ಸಾಮ್ರಾಜ್ಯ ವೈಭವ ಇಂದೂ ಮನೆಮಾತಾಗಿದೆ.

ಜಯಚಾಮರಾಜ ಒಡೆಯರ್: ಮೈಸೂರು ಸಂಸ್ಥಾನದ 25ನ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು 1940ರಿಂದ 1950ರವರೆಗೆ ರಾಜ್ಯಭಾರ ನಡೆಸಿ, 1950ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ 1956ರವರೆಗೆ ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ 1964ರವರೆಗೆ ಅದರ ರಾಜ್ಯಪಾಲರಾಗಿದ್ದರು.

ಕೆಂಪೇಗೌಡರು 1510ರಿಂದ 1569ರವರೆಗೆ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ಹೈದರ್ ಆಲಿ ಮತ್ತು  ಟಿಪ್ಪು ಸುಲ್ತಾನ: ಅಪ್ಪ-ಮಗನಿಬ್ಬರು ಸೇರಿ 18ನೇ ಶತಮಾನದಲ್ಲಿ ಮೈಸೂರು ಒಡೆಯರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಶಕ್ತಿಯಲ್ಲಿ ತುತ್ತತುದಿ ತಲುಪಿತ್ತು. ಇವರು ಮರಾಠರು,  ಆಂಗ್ಲರು ಹಾಗೂ ಗೋಲ್ಕೊಂಡದ ನಿಝಾಮರ ವಿರುದ್ಧ ಸಮರ ಸಾರಿದ್ದರು. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯರಡರಲ್ಲಿ ಸೋಲಪ್ಪಿತು. 1799ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು. ತದನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು 1947ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುಂದುವರೆಯಿತು.

ಮೈಸೂರು ರಾಜ್ಯ ನವೆಂಬರ್ 1, 1956ರಲ್ಲಿ ರಚನೆಯಾಯಿತು. ಕೊಡಗು, ಮದ್ರಾಸ್, ಹೈದರಾಬಾದ್ ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಕರ್ನಾಟಕ "ಏಕೀಕರಣ" ಚಳುವಳಿ 19 ನೆಯ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಯಿತು. ಇದರ ಫಲವಾಗಿ ಸಮಗ್ರ ಕರ್ನಾಟಕ ರೂಪುಗೊಂಡಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಅಂದಿನಿಂದ ನವೆಂಬರ್ 1 ನ್ನು ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.


- ಸುಮನಾ
(ಮಾಹಿತಿ: ವಿವಿಧ ಮೂಲಗಳಿಂದ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com