ಪ್ರಧಾನಿ ಮೋದಿಯವರ ಸೋಲು ಎನ್ನುವುದು ಸರಿಯಲ್ಲ, ಬಿಜೆಪಿ ಹಿಂದುತ್ವದ ಮೇಲೆ ಹೋರಾಟ ಮಾಡಿಲ್ಲ: ಹಂಗಾಮಿ ಸಿಎಂ ಬೊಮ್ಮಾಯಿ
ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇವೆ. ಮುಂದೆ ಪಕ್ಷದ ಸಂಘಟನೆ ಮತ್ತು ಆಯ್ಕೆಯಾದ ಶಾಸಕರು ಯಾವ ರೀತಿ ಒಟ್ಟಾಗಿ ಪಕ್ಷವನ್ನು ಬಲವರ್ಧನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಇವತ್ತು ಸಭೆ ನಡೆಸಿದ್ದೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 14th May 2023 01:52 PM | Last Updated: 14th May 2023 01:52 PM | A+A A-

ಮುಖ್ಯಮಂತ್ರಿ ಹುದ್ದೆಗೆ ರಾಜ್ಯಪಾಲರ ಬಳಿ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು; ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇವೆ. ಮುಂದೆ ಪಕ್ಷದ ಸಂಘಟನೆ ಮತ್ತು ಆಯ್ಕೆಯಾದ ಶಾಸಕರು ಯಾವ ರೀತಿ ಒಟ್ಟಾಗಿ ಪಕ್ಷವನ್ನು ಬಲವರ್ಧನೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಇವತ್ತು ಸಭೆ ನಡೆಸಿದ್ದೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಗೋಸ್ಕರ ಮಾತ್ರ ನಾವು ಪಕ್ಷದ ಕೆಲಸ ಮಾಡುತ್ತಿಲ್ಲ. ಚುನಾವಣೆ ಬಂದಾಗ ಚುನಾವಣೆಗೆ ಕೆಲಸ ಮಾಡುತ್ತೇವೆ. ಚುನಾವಣೆ ನಂತರ ಕೂಡ ನಮ್ಮ ಕೆಲಸ, ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ. ಜನರ ಬಳಿಗೆ ಕಾರ್ಯಕ್ರಮಗಳನ್ನು ತೆಗೆದುಕೊಂಡು ಹೋಗಲು ಪಕ್ಷವನ್ನು ಪುನರ್ ಸಂಘಟನೆಯನ್ನು ನಿರಂತರವಾಗಿ ಮಾಡುತ್ತೇವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ: 2013ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 40 ಸೀಟುಗಳು ಬಂದಿದ್ದವು. 2014ರ ಲೋಕಸಭೆ ಚುನಾವಣೆಯಲ್ಲಿ 19 ಸೀಟು ಗೆದ್ದಿದ್ದೆವು. ಈಗ ಅದಕ್ಕಿಂತ ಹೆಚ್ಚಿನ ಶಕ್ತಿಶಾಲಿಯಾಗಿದ್ದೇವೆ. ಸೋಲನ್ನು ಅತ್ಯಂತ ವಿನಯದಿಂದ ಸ್ವೀಕರಿಸಿ, ಸೋಲಿನ ಕಾರಣಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿ ಮುಂದುವರುತ್ತೇವೆ ಎಂದರು.
ಮೋದಿಯವರನ್ನು ಇಡೀ ರಾಷ್ಟ್ರ ಒಪ್ಪಿಕೊಂಡಿದೆ: ಪ್ರಧಾನಿ ಮೋದಿಯವರ ನಾಯಕತ್ವವನ್ನು ಇಡೀ ದೇಶ ಒಪ್ಪಿಕೊಂಡಿದೆ, ಅವರು ಇಡೀ ದೇಶಕ್ಕೆ ಬೇಕಾದವು, ಪಕ್ಷಕ್ಕೆ ಸೀಮಿತವಲ್ಲ, ಕಾಂಗ್ರೆಸ್ ನ್ನು ಇಡೀ ರಾಷ್ಟ್ರ ತಿರಸ್ಕರಿಸಿದೆ. ಕರ್ನಾಟಕದಲ್ಲಿ ಗೆದ್ದಿರಬಹುದು, ಇಡೀ ದೇಶದಲ್ಲಿ ಸೋತಿದೆ. ಸ್ಥಳೀಯ ನಾಯಕತ್ವ ಇಲ್ಲಿ ಗೆದ್ದಿದೆಯಷ್ಟೆ ಎಂದರು.
ಚುನಾವಣೆಯಲ್ಲಿ ಸೋಲು ಗೆಲುವು ಲೆಕ್ಕಾಚಾರಗಳಲ್ಲಿ ಹಲವು ವಿಷಯಗಳು ಬರುತ್ತವೆ. ಆಡಳಿತ ವಿರೋಧಿ ಅಲೆ ಕೂಡ ಕಾರಣವಿದೆ. ವಿಸ್ತೃತವಾಗಿ ವಿಶ್ಲೇಷಣೆ ಮಾಡಬೇಕು.
ಹಿಂದುತ್ವದ ಮೇಲೆ ಹೋರಾಟ ಮಾಡಿಲ್ಲ: ಬಿಜೆಪಿ ಎಂದಿಗೂ ಹಿಂದುತ್ವದ ಮೇಲೆ ಹೋರಾಟ ನಡೆಸಿಲ್ಲ. ಅದು ಕೆಲವರ ಮನಸ್ಸಿನಲ್ಲಿದೆ, ಡಬಲ್ ಎಂಜಿನ್ ಸರ್ಕಾರದ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಹೋರಾಟ ಮಾಡಿದ್ದೇವೆ. ಕಾಂಗ್ರೆಸ್ ನವರು ರಾಜಕೀಯ ಧ್ರುವೀಕರಣ ಮಾಡಲು ನೋಡುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ ಒಂದು ಸಮುದಾಯ ಸರ್ಕಾರವನ್ನು ನಿರ್ಧಾರ ಮಾಡುವುದಲ್ಲ. ಎಲ್ಲಾ ಸಮುದಾಯಗಳು ಯಾರು ಗೆಲ್ಲುವುದು, ಸೋಲುವುದು ಎಂದು ನಿರ್ಧರಿಸುವುದು.