ಯಡಿಯೂರಪ್ಪ ಸ್ಲಂ ವಾಸ್ತವ್ಯ: ಮನೆ ಮಾಲೀಕರಿಗೆ ಟಾಯ್ಲೆಟ್ ತಂದ ನಷ್ಟ!

ರಾಜಕೀಯ ನಾಯಕರ ನಡುವಿನ ಕಿತ್ತಾಟದಿಂದ ಸಾಮಾನ್ಯ ಜನತೆಯ ಬದುಕು ಎಷ್ಟು ಹೈರಾಣಾಗಿ ...
ಮನೆಯೊಡತಿ 64 ವರ್ಷದ ವೃದ್ಧೆ ಇಂದ್ರಾಣಿ
ಮನೆಯೊಡತಿ 64 ವರ್ಷದ ವೃದ್ಧೆ ಇಂದ್ರಾಣಿ
ಬೆಂಗಳೂರು: ರಾಜಕೀಯ ನಾಯಕರ ನಡುವಿನ ಕಿತ್ತಾಟದಿಂದ ಸಾಮಾನ್ಯ ಜನತೆಯ ಬದುಕು ಎಷ್ಟು ಹೈರಾಣಾಗಿ ಹೋಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.
ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕೊಳಚೆ ನಿವಾಸಿಗಳ ಸಮಸ್ಯೆ ಮತ್ತು ಅವರ ಬೇಡಿಕೆಗಳನ್ನು ತಿಳಿಯಲೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಒಂದು ರಾತ್ರಿ ಗಾಂಧಿನಗರದ ಲಕ್ಷ್ಮಣಪುರಿ ಕೊಳಗೇರಿಯ ನಿವಾಸಿ ಆಟೋಚಾಲಕ ಮುನಿರತ್ನ ಎಂಬವರ 22*12 ಅಡಿಯ ಸಣ್ಣ ಮನೆಯಲ್ಲಿ ಉಳಿದುಕೊಂಡಿದ್ದರು.
ಸಿಮೆಂಟ್ ಶೀಟ್ ನ ಮನೆಯಲ್ಲಿ ಒಂದು ರೂಂ, ಸಣ್ಣ ಹಾಲ್, ಕಿಚನ್ ಮತ್ತು ಬಾತ್ ರೂಂ ಮತ್ತು ಇಂಡಿಯನ್ ಸ್ಟೈಲ್ ಶೌಚಾಲಯವಿದೆ. ಈ ಮನೆಯಲ್ಲಿ ಭಾರತೀಯ ಶೈಲಿನ ಶೌಚಾಲಯವಿರುವುದರಿಂದ ಯಡಿಯೂರಪ್ಪನವರಿಗೆ ಕಷ್ಟವಾಗುತ್ತದೆ ಎಂದು ವೆಸ್ಟರ್ನ್ ಕಮೋಡ್ ಬೇಕೆಂದು ಬಿಜೆಪಿ ಕಾರ್ಯಕರ್ತರು ಕಟ್ಟಿಸಿದರು.
ಕೆಲವೇ ದಿನಗಳಲ್ಲಿ ಸಿದ್ದವಾಯಿತು. ಬಿಜೆಪಿಯೇ ಅದರ ವೆಚ್ಚವನ್ನು ಭರಿಸಿತು. ಯಡಿಯೂರಪ್ಪನವರು ಆ ಮನೆಯಲ್ಲಿ ಒಂದು ರಾತ್ರಿ ಕಳೆದ ನಂತರ ಹೋದವರು ಮತ್ತೆ ಅಲ್ಲಿನ ಜನರನ್ನು ಸಂಪರ್ಕಿಸಲಿಲ್ಲ. ವೆಸ್ಟರ್ನ್ ಶೈಲಿಯಲ್ಲಿ ಕಟ್ಟಿಸಿದ ಕಮೋಡ್ ಮನೆಯವರಿಗೆ ಇಷ್ಟವಾಗಲಿಲ್ಲ, ಅದನ್ನು ಬಳಸಲು ಸರಿಯಾಗದೆ ತೆಗೆದು ಇಂಡಿಯನ್ ಶೈಲಿಯಲ್ಲಿ ಕಟ್ಟಿಸಿದರು.
ಈ ಮನೆಯ 64 ವರ್ಷದ ವೃದ್ಧೆ ಇಂದ್ರಾಣಿ ತನ್ನ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ನೆಲೆಸಿದ್ದಾರೆ, ''ನಮಗೆ ವೆಸ್ಟರ್ನ್ ಶೈಲಿಯ ಕಮೋಡ್ ಬಳಸಿ ಗೊತ್ತಿಲ್ಲ, ಅದರಲ್ಲಿ ಕೂರಲು ಹೋಗಿ ಬಿದ್ದು ನಾನು ಏಟು ಮಾಡಿಕೊಂಡೆ. ಹಾಗಾಗಿ ಅದನ್ನು ತೆಗೆದು ಹಳೆ ಶೈಲಿಯಲ್ಲಿ ಮಾಡಿಸಿಕೊಂಡೆವು, 15 ಸಾವಿರ ರೂಪಾಯಿ ಖರ್ಚಾಯಿತು, ಸ್ಥಳೀಯ ನಾಯಕರನ್ನು ಕೇಳಿದರೆ 4 ಸಾವಿರ ರೂಪಾಯಿ ಕೊಟ್ಟರು. ಉಳಿದ 11 ಸಾವಿರ ರೂಪಾಯಿ ನಾವೇ ಭರಿಸಬೇಕು ಎಂದರು ಇಂದ್ರಾಣಿ.
ಬೆಂಗಳೂರಿನಲ್ಲಿರುವ ಬೇರೆ ಕೊಳಚೆ ಪ್ರದೇಶಗಳಂತೆ ಲಕ್ಷ್ಮಣಪುರಿಯಲ್ಲಿ ಕೂಡ ಹತ್ತಾರು ಸಮಸ್ಯೆಗಳಿವೆ. ಕುಡಿಯುವ ನೀರು, ಪದೇ ಪದೇ ವಿದ್ಯುತ್ ಕಡಿತ, ರಸ್ತೆ ದುರವಸ್ಥೆ. ಮುನಿರತ್ನ ಅವರಿಗೆ ಈ ಹಿಂದೆ ಶೌಚಾಲಯದ ಸಮಸ್ಯೆಯಿರಲಿಲ್ಲ. ಯಡಿಯೂರಪ್ಪನವರು ಬಂದು ಒಂದು ರಾತ್ರಿ ಅವರ ಮನೆಯಲ್ಲಿ ವಾಸಿಸಿದ ಮೇಲೆ ಇಷ್ಟೆಲ್ಲಾ ಸಮಸ್ಯೆಗಳು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com