ಏಪ್ರಿಲ್ 16 ರಂದು ಪ್ರಕರಣ ಹೊರ ಜಗತ್ತಿಗೆ ತಿಳಿಯಿತು. ಆದರೆ ಅದರ ಹಿಂದಿನ ದಿನವೇ ಅಂದರೆ ಏಪ್ರಿಲ್ 15ರಂದು ಬೆಟ್ಟದಲ್ಲಿ ಯುವತಿಯ ಶವ ನೇತಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನ ಒಂದು ದಿನ ಬಿಟ್ಟು ಪೊಲೀಸರು ಕೆಳಗಿಳಿಸಿದ್ದಾರೆ. ಫೋರೆನ್ಸಿಕ್ ತಜ್ಞರ ತಂಡ ಬರುವವರೆಗೂ ಪೊಲೀಸರು ಶವವನ್ನು ಹಾಗೇ ಬಿಟ್ಟಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವದ ಬಳಿ ಸಿಕ್ಕ ಡೆತ್ ನೋಟ್ ನಿಂದಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಪದೇ ಪದೇ ಪರೀಕ್ಷೆಯಲ್ಲಿ ಫೇಲ್ ಆಗುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು. ಆದರೆ ಮಧು ಪತ್ತಾರ್ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ ಹಾಗೂ ಫೇಲ್ ಆಗಿರಲಿಲ್ಲ. ಅಂತೆಯೇ ಮಧು ಮೃತದೇಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಕೊಲೆ ಸಂಶಯ ಹೆಚ್ಚಾಗಿ ವಿದ್ಯಾರ್ಥಿಗಳು ನಿರಂತರ ಹೋರಾಟಕ್ಕೆ ಮುಂದಾದರು. ಕೊನೆಗೆ ಪೋಷಕರ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಯಾದವ್ ನನ್ನು ಬಂಧಿಸಿದ್ದಾರೆ.