ಉಡುಪಿಯಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

ಲೋಕಸಭೆ ಚುನಾವಣೆಯ ತಿಂಗಳುಗಟ್ಟಲೆ ಬಿರುಸಿನ ಪ್ರಚಾರದ ನಂತರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಲೋಕಸಭೆ ಚುನಾವಣೆಯ ತಿಂಗಳುಗಟ್ಟಲೆ ಬಿರುಸಿನ ಪ್ರಚಾರದ ನಂತರ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯ ಸುಧಾರಣೆಗೆ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಿದ್ದಾರೆ.
ಉಡುಪಿಯ ಬೀಚ್ ರೆಸಾರ್ಟ್ ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಿಎಂ ಕುಮಾರಸ್ವಾಮಿ ತೆರಳಿದ್ದರು. ಜೆಡಿಎಸ್ ನ ಕೆಲವು ಸಚಿವರುಗಳೊಂದಿಗೆ ಕುಮಾರಸ್ವಾಮಿ ಉಡುಪಿ ಜಿಲ್ಲೆಯ ಕಾಪು ಬಳಿಯ ಮುಲೂರ್ ನ ಸಾಯಿ ರಾಧಾ ಹೆರಿಟೇಜ್ ರೆಸಾರ್ಟ್ ಗೆ ತೆರಳಿದ್ದು ಅಲ್ಲಿ ಆಯುರ್ವೇದ ಚಿಕಿತ್ಸೆ ಪಡೆದು ಅರ್ಧಕ್ಕೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಮೊನ್ನೆ ಸೋಮವಾರ ಸುಮಾರು 4 ಗಂಟೆಗಳ ಕಾಲ ಪಂಚಕರ್ಮ ಚಿಕಿತ್ಸೆ ಪಡೆದುಕೊಂಡರು, ಅಲ್ಲದೆ ಎಡಗೈ ನೋವಿಗೆ ಸಹ ಚಿಕಿತ್ಸೆ ಪಡೆದುಕೊಂಡರು. ಮಂಡ್ಯ ಜಿಲ್ಲೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದಾಗ ಅಭಿಮಾನಿಗಳಿಗೆ ಕೈ ನೀಡಿ ಕುಲುಕುತ್ತಾ ಇದ್ದಿದ್ದರಿಂದ ವಾಹನದಲ್ಲಿ ನಿಂತುಕೊಂಡು, ವಾಹನ ಚಲಿಸುತ್ತಿರುವಾಗ ಕೂಡ ಕೈ ಕುಲುಕಿದ ಕಾರಣ ಕುಮಾರಸ್ವಾಮಿಯವರ ಕೈಗೆ ನೋವಾಗಿತ್ತು. ಆದರೆ ರಾಜಕೀಯದ ಬಿಸಿ ಚಟುವಟಿಕೆಯಿಂದಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚುನಾವಣೆಯೆಲ್ಲ ಮುಗಿದ ನಂತರ ಕುಮಾರಸ್ವಾಮಿಯವರು ರೆಸಾರ್ಟ್ ಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬರುತ್ತಿರುವುದು ಇದು ಎರಡನೇ ಬಾರಿ ಎಂದರು ಜೆಡಿಎಸ್ ನಾಯಕರೊಬ್ಬರು.
ಆರಂಭದಲ್ಲಿ ಸಿಂ ಕುಮಾರಸ್ವಾಮಿ ರೆಸಾರ್ಟ್ ನಲ್ಲಿ 4 ದಿನ ತಂಗಲು ಯೋಜಿಸಿದ್ದರು. ಆದರೆ ಶ್ರೀಲಂಕಾದಲ್ಲಿ ಬಾಂಬ್ ದಾಳಿಯಾದ ನಂತರ ರಾಜ್ಯದ ಹಲವರು ಮತ್ತು ಜೆಡಿಎಸ್ ಕಾರ್ಯಕರ್ತರು ಮೃತರಾಗಿದ್ದರಿಂದ ರೆಸಾರ್ಟ್ ನಲ್ಲಿನ ವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿನ್ನೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com