ಬೆಂಗಳೂರು: ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿರುವುದನ್ನು ಮರೆತು ಪ್ಲಾಸ್ಟಿಕ್ ಬಳಸಿ ಪ್ಯಾಕ್ ಮಾಡಿದ ಹಣ್ಣಿನ ಬುಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೀಡಿದ ಮೇಯರ್ ಗಂಗಾಂಬಿಕೆ ಅವರಿಗೆ ಬಿಬಿಎಂಪಿಯಿಂದಲೇ 500 ರೂ. ದಂಡ ವಿಧಿಸಲಾಗಿದೆ. .
ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಮೇಯರ್ ಗಂಗಾಂಬಿಕೆ ನಗರದಾದ್ಯಂತ ಅಭಿಯಾನ ನಡೆಸುತ್ತಿದ್ದಾರೆ. ಶಾಲಾ-ಕಾಲೇಜು ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಅರಿವು ಮೂಡಿಸುತ್ತಿದ್ದಾರೆ.
ಆದರೆ ಜು.30 ರಂದು ನೂತನ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದ ಮೇಯರ್ ಗಂಗಾಂಬಿಕೆ ಒಣಹಣ್ಣಿನ ಬುಟ್ಟಿಯನ್ನು ಉಡುಗೊರೆಯಾಗಿ ನೀಡಿ ಪೋಟೊ ತೆಗೆಸಿಕೊಂಡಿದ್ದರು.
ಇದೇ ಪೋಟೊಗೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿತ್ತು. ಪ್ಲಾಸ್ಟಿಕ್ ಬಳಕೆ ನಿಷೇಧ ಇದ್ದರೂ ಮೇಯರ್ ಅವರು ಪ್ಲಾಸ್ಟಿಕ್ನಿಂದ ಸುತ್ತಿದ್ದ ಒಣಹಣ್ಣಿನ ಬುಟ್ಟಿಯನ್ನು ನೀಡಿರುವುದು ಟೀಕೆಗೊಳಗಾಗಿತ್ತು.
ಈ ಬೆಳವಣಿಗೆ ಬಳಿಕ ಮೇಯರ್ ಅವರಿಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 500 ರೂ. ದಂಡ ವಿಧಿಸಿ ರಶೀದಿ ಕೊಟ್ಟಿದ್ದಾರೆ. ತಮ್ಮ ತಪ್ಪಿನ ಅರಿವಾಗಿರುವ ಮೇಯರ್ ಗಂಗಾಂಬಿಕೆ, ಮುಂದೆ ಎಂದೂ ಪ್ಲಾಸ್ಟಿಕ್ ಬಳಸಿರುವ ಪ್ಯಾಕ್ ಮಾಡಿದ ಉಡುಗೊರೆ ಕೊಡುವುದಿಲ್ಲ ಎಂದು ಹೇಳಿದ್ದಾರೆ.
Karnataka: Bengaluru Mayor Gangambike Mallikarjun paid Rs 500 fine for presenting a gift wrapped in plastic to Chief Minister BS Yediyurappa. Plastic was banned by Bruhat Bengaluru Mahanagara Palike (BBMP) in 2016. pic.twitter.com/4To7o9BAGQ