ಮಡಿಕೇರಿ: ದೇವಸ್ಥಾನದ ತೀರ್ಥದ ಹೆಸರಿನಲ್ಲಿ ಕೊರಿಯರ್ ಮೂಲಕ ಬಂದ ತೀರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಸೋಮವಾರ ಪೇಟೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್
ಮೃತ ವ್ಯಕ್ತಿ.
ಸುರೇಶ್ ಅವರ ಮನೆಗೆ ಕೊರಿಯರ್ ನಲ್ಲಿ ಪಾರ್ಸೆಲ್ ಒಂದು ಬಂದಿದೆ. ಅದನ್ನು ಅವರ ಪತ್ನಿ ಪಡೆದುಕೊಂಡಿದ್ದು, ಬಳಿಕ ಪತಿಗೆ ನೀಡಿದಾಗ ಕಾಸರಗೋಡು ವಿಷ್ಣುಮೂರ್ತಿ ಮಂತ್ರ ದೇವಾಲಯದಿಂದ ತೀರ್ಥ ಬಂದಿರುವುದಾಗಿ ಹೇಳಿದ್ದಾರೆ.
ನಂತರ ಪೂಜೆ ಮಾಡಿ ಅದನ್ನು ಸುರೇಷ್ ಸೇವಿಸಿದ್ದಾರೆ. ಕೂಡಲೇ ಬಾಯಿಂದ ರಕ್ತ ಬರಲು ಆರಂಭಿಸಿದೆ. ಕೂಡಲೇ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು, ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಈ ಸಂಬಂಧ ಸುರೇಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಡಿಕೇರಿ ಆಸ್ಪತ್ರೆಯಲ್ಲಿ ಸುರೇಶ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹತ್ಯೆ ಮಾಡುವ ಉದ್ದೇಶದಿಂದಲೇ ವಿಷಪೂರಿತ ದ್ರಾವಣವನ್ನು ಕೊರಿಯರ್ ಮೂಲಕ ಕಳುಹಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಸತ್ಯಾಂಶ ತಿಳಿದುಬರಲಿದೆ.